ಓದಿ ಓಡಿದವರು!

Monday 6 August 2012

ಕಾಲ!




 ಪ್… ಟಪ್… ಟಪ್… ಎಂಬ ನಿರಂತರ ಶಬ್ಧ.
ದೊಡ್ಡ ಮಂಜು ಮುಸುಕಿದ ಕೋಣೆ. ಹಿಂದೆ ಎಲ್ಲೋ ಒಂದು ದೊಡ್ಡ ಗಡಿಯಾರ ಒಂದೊಂದು ಸೆಕೆಂಡಿಗೂ ಟಪ್ ಟಪ್ ಟಪ್ ಎಂದು ಸದ್ದು ಮಾಡುತ್ತಾ ತಿರುಗುತ್ತಿರುವ ಗಡಿಯಾರದ ಮುಳ್ಳು. ಘಮ್ಮನೆ ಸುಗಂಧ ಬೀರುತ್ತಿರುವ ಅದಾವುದೋ ದ್ರವ್ಯ. ಅಲ್ಲೆಲ್ಲೋ ತುಂಬಾ ದೂರದೂರದಲ್ಲಿ ಬಾರಿಸುತ್ತಿರುವಂತೆ, ಕೀರಲಾಗಿ ಅಲೆ ಅಲೆಯಾಗಿ ತೇಲಿ ಬರುತ್ತಿರುವ ಅದಾವುದೋ ಸಿತಾರೋ ವೀಣೆಯದೋ ನಾದ. ಈ ಕೋಣೆಗೆ ಗೋಡೆಗಳಿವೆಯೋ ಇಲ್ಲವೋ ಗೊತ್ತಿಲ್ಲ. ದೊಡ್ಡ ದೊಡ್ಡ ಕಿಟಕಿಗಳಂತೂ ಅಲ್ಲಲ್ಲಿ ಇವೆ. ಹಾಗೇ ಒಳ ಪ್ರವೇಶಿಸಿ ಕಿಟಕಿಯ ಬಳಿ ಹೊರಗಿಣುಕಿದರೆ ದೊಡ್ಡ ಹಸಿರಸಿರು ಬೆಟ್ಟಗಳು ಮಧ್ಯದಲ್ಲೆಲ್ಲೋ ಚಲಿಸುತ್ತಿರುವ ಮೋಡಗಳ ನಡುವಿನಿಂದ ಕಾಣುತ್ತಿರುವ ಜಲಪಾತ ಯಾವುದರ ಪರಿವೆಯೂ ಇಲ್ಲದೆ ಹಾರುತ್ತಿರುವ ಹಕ್ಕಿಗಳು. ಆಹಾ ಕಣ್ಣುಗಳನ್ನು ಮುಚ್ಚಿ ಆಸ್ವಾದಿಸಬೇಕಷ್ಟೇ ಆ ಹೊರಗಿನ ಪ್ರಪಂಚವನ್ನ. ಢಣ್ಣ್!!!! ಗಡಿಯಾರ ಎಚ್ಚರಿಸಿತು.

ಒಂದು ಮೇಜು ಅದರ ಮೇಲೆ ಹಣ್ಣು ಹಂಪಲು, ಸಿಹಿ ತಿನಿಸುಗಳು, ಹಾಲು ಸುಗಂಧ ಪಸರಿಸುತ್ತಿರುವ ಗಂಧದ ಕಡ್ಡಿಗಳು. ನೋಡಿದ್ದೇ ಅದೆಲ್ಲಿತ್ತೋ ಹಸಿವು ಥಟ್ಟನೆ ಶುರುವಾಗಿಹೋಯ್ತು. ಹೊಟ್ಟೆ ಚುರುಗುಟ್ಟಿದ್ದೇ ಕಾಲುಗಳು ತನ್ನಿಂತಾನೇ ಎಳೆದುಕೊಂಡು ಅದರ ಬಳಿ ಹೋಗಿ ನಿಲ್ಲಿಸಿತು. ಯಾವುದನ್ನ ಭಕ್ಷಿಸಲಿ. ಹೊಟ್ಟೆ ರಾಕ್ಷಸಾಕಾರ ತೊಟ್ಟು ಎಲ್ಲವನ್ನೂ ಒಂದೇ ಸಾರಿ ಮುಗಿಸಿಬಿಡು ಎನ್ನುತ್ತಲಿದೆ. ಇನ್ನೇನು ಮುಟ್ಟಬೇಕು ಅರೆರೆ! ಹೊಳೆಯುತ್ತಿರುವ ಬಂಗಾರ, ದುಡ್ಡಿನ ಥಾಲಿ. ಆಸೆಯ ಮುಂದೆ ಹಸಿವು ಎಂಥದ್ದು! ಹಣ್ಣು ಹಸಿವು ಎಲ್ಲ ಒಂದೇ ಏಟಿಗೆ ಥಟ್ಟನೆ ಕಣ್ಣಿನಿಂದ ಮರೆಯಾಗಿ ಬರೀ ಬಂಗಾರ, ದುಡ್ಡೇ ಕಾಣಿಸುತ್ತಲಿದ್ದವು. ಬಿಟ್ಟರೆ ಕಣ್ಣುಗಳು ನನ್ನಿಂದ ಕಿತ್ತುಕೊಂಡು ಹೋಗಿ ಬಂಗಾರಕ್ಕೆ ಅಂಟಿಬಿಡುತ್ತಿದ್ದವೇನೋ. ಮೊದಲು ಅಷ್ಟೂ ಅಮೂಲ್ಯವಾದವುಗಳನ್ನು ಸಾಧ್ಯವಾದಷ್ಟೂ ಬಾಚಿಕೊಂಡು ಇಲ್ಲಿಂದ ಪೇರಿ ಕಿತ್ತಬೇಕೆಂದುಕೊಂಡೆ. ನನ್ನ ಆಲೋಚನೆಗೆ ನನಗೇ ನಗು ಬಂತು. ಎಲ್ಲಿಗೆಂದು ಓಡುವುದು? ಇಲ್ಲಿ ನನ್ನಿಂದ ಕಿತ್ತುಕೊಳ್ಳುವವರೂ ಯಾರೂ ಇಲ್ಲವಲ್ಲ. ಆದರೆ, ದುಡ್ಡಿದೆ ಎಂದರೆ ಅಷ್ಟು ಸುಲಭವಾಗಿ ಅದು ನನಗೆ ಸಿಗುವಹಾಗಂತೂ ಇರುವುದಿಲ್ಲ. ನೂರು ರೂಪಾಯಿ ಬೇಕೆಂದರೆ ದಿನವಿಡೀ ದುಡಿಯಬೇಕಾದೀತು. ಮೂವತ್ತು ರೂಪಾಯಿಗೆ ದೇಹ ಮಾರಿಕೊಂಡು ಸಂಪಾದಿಸುವವರಿದ್ದಾರೆ ಇನ್ನ ಇಷ್ಟು ರಾಶಿ ಹಣ! ಯಾರಾದರೂ ಇದ್ದೇ ಇದ್ದಾರೆಂದು ಆ ಮಂಜು ಮುಸುಕಿದ ಕೋಣೆಯಲ್ಲಿ ಸಾಧ್ಯವಾದಷ್ಟೂ ಕಣ್ಣರಳಿಸಿ ತೀಕ್ಷ್ಣವಾಗಿ ಪರಿಶೀಲಿಸಲು ಯತ್ನಿಸಿದೆ. ಕಾವಲಿಗೆ ಯಾರೂ ಇರಲಿಲ್ಲ. ಆದರೆ!

ಆದರೆ, ಇಡೀ ಪ್ರಪಂಚವನ್ನೇ ಮರೆಸಿಬಿಡುವ, ನೀಲ ಕಣ್ಗಳ, ಕಪ್ಪಾನೆ ಕಪ್ಪು ಗುಂಗುರು, ನೀಳ ಕೇಶರಾಶಿಯ ಹಾಲಿನ ವರ್ಣವನ್ನೂ ನಾಚಿಸುವಂತಹ ತೊಗಲುಳ್ಳ ಸುಂದರಿಯೋರ್ವಳು ಸುಮ್ಮನೆ ಕುಳಿತುರುವಳು. ಹೊರಗಿನ ಸುಂದರ ಪ್ರಪಂಚ, ಈ ಹಸಿವು ನೀಗಿಸುವ ವಿವಿಧ ಭಕ್ಷ್ಯ ಭೋಜನಗಳು, ಬಾಯಾರಿಸುವ ಹಾಲು, ಸುತ್ತೆಲ್ಲೆಲ್ಲೂ ಬೇಕಾಬಿಟ್ಟಿ ಬಿದ್ದಿರುವ ವರ್ಣರಂಜಿತ ತರಹೇವಾರಿ ಧಿರಿಸುಗಳು, ಅಷ್ಟೇ ಏಕೆ ಕಣ್ಣೆದುರಿಗೇ ಹೇರಳವಾಗಿ ಸುರಿದುಕೊಂಡಿರುವ ವೈಢೂರ್ಯಗಳೂ ಸಹ ನಿವಾಳಿಸಿ ಎಸೆದುಬಿಟ್ಟೇನು ಅವಳಿಗಾಗಿ. ಒಮ್ಮೆ ನನ್ನೆಡೆ ತಿರುಗಿ ನೋಡಬಾರದಾ ಅವಳು ಎಂದುಕೊಳ್ಳುತ್ತಿದ್ದಂತೆಯೇ ಅಯ್ಯಯ್ಯೋ ನನ್ನೆಡೆಗೇ ತನ್ನ ಕಣ್ಣ ಗೊಂಬೆಗಳನ್ನ ತಿರುಗಿಸಿ ಮಂದಹಾಸದೊಂದಿಗೆ ನೋಡಿಯೇ ಬಿಟ್ಟಳು. ಎದೆ ಒಮ್ಮೆ ತನ್ನ ಬಡಿತ ಸ್ಥಗಿತಗೊಳಿಸಿ ಉಸಿರು ಒಳಗೇ ಕಟ್ಟಿಕೊಂಡಿತು. ಅವಳು ನನ್ನೆಡೆಗೆ ತಿರುಗಿದ್ದೇ, ನಾನು ಅವಳಿಂದ ಕಣ್ಣು ತಿರುಗಿಸಿ ಅವಳಿಗೆ ಬೆನ್ನು ಹಾಕಿ ನಿಂತಿದ್ದಕ್ಕೆ ಬೇಸರಿಸಿದಳೋ ಏನೋ. ಇನ್ನೂ ನನ್ನೆಡೆಗೇ ನೋಡುತ್ತಲಿರಬಹುದೇ? ಅರೆರೆ, ಇವಳನ್ನೇ ದುಡ್ಡು ಕಾಯಲಿಕ್ಕಾಗಿ ಏಕೆ ಬಿಟ್ಟಿರಬಾರದು. ಇವಳನ್ನು ನೋಡಿದವನು ಮತ್ತೆ ದುಡ್ಡಿನ ಕಡೆಗಂತೂ ಹೋಗಲಾರನು. ಇಲ್ಲ ನಾನು ಮೋಸ ಹೋಗಬಾರದೆಂದೆನಿಸಿತು. ದುಡ್ಡಿದ್ದರೆ ಎಲ್ಲಾ ಸಿಕ್ಕಂತೆಯೇ, ಎಲ್ಲವನ್ನೂ ಪಡೆದುಕೊಳ್ಳಬಹುದು. ಆದರೆ ಅವಳ ಹಿಂದೆ ಹೋದರೆ, ಅವಳೂ ಒಂದಲ್ಲ ಒಂದು ದಿನ ದುಡ್ಡು ಕೇಳಿಯೇ ಕೇಳುತ್ತಾಳೆ. ದುಡ್ಡು ಮುಖ್ಯ. ಛೆ ಛೆ ಇಲ್ಲ ಇಂಥವಳ ಸಹವಾಸವಿಲ್ಲದ ದುಡ್ಡು ಇಟ್ಟುಕೊಂಡು ಏನು ಉಪ್ಪಿನಕಾಯಿ ಹಾಕಿಕೊಂಡು ನೆಕ್ಕಲ. ಅವಳ ಕಡೆ ಮತ್ತೆ ತಿರುಗುವ ಧೈರ್ಯ ಮಾಡೋಣವೆಂದರೆ ಧೈರ್ಯ ಸಾಲದು. ನಾನು ಅವಳ ವಿರುದ್ಧ ತಿಕ್ಕಿನಲ್ಲಿ ತಿರುಗಿದ್ದರೂ ನನ್ನ ಕಣ್ಣುಗಳು ಮಾತ್ರ ಅವಳಲ್ಲೇ ನೆಟ್ಟಿತ್ತು. ಕಣ್ಣಲ್ಲೇ ಅವಳನ್ನು ಇಡಿಯಾಗಿ ಬಿಡಿ ಬಿಡಿಯಾಗಿ ಅಳತೆ ಮಾಡಿ, ಆಸ್ವಾದಿಸಿ, ಅನುಭವಿಸುವಷ್ಟರಲ್ಲೇ ಢಣ್…. ಢಣ್…. ಎಂದು ಹೊಡೆದುಕೊಂಡಿತು ಗಂಟೆ, ಗಡಿಯಾರದ ಗಂಟೆ. ಅದು ಎಬ್ಬಿಸಿದ ಅಲೆಗಳಿಂದ ಒಮ್ಮೆ ಭೂಕಂಪನವಾದಂತಾಗಿ ಸುಧಾರಿಸಿಕೊಂಡು ಮತ್ತೆ ಅವಳೆಡೆಗೆ ತಿರುಗಿದರೆ, ಅವಳೆಲ್ಲಿ. ಅಯ್ಯಯ್ಯೋ ಕಳೆದುಕೊಂಡೆ, ಮೀನಾಮೇಷ ಎಣಿಸಿ ತಪ್ಪು ಮಾಡಿದೆನೇನೋ. ಇಲ್ಲೇ ಎಲ್ಲಾದರೂ ಇದ್ದಾಳು, ದೂರ ಹೋಗಿರಲಾರಳು ಎಂದುಕೊಂಡು ಹುಡುಕುತ್ತಾ ಹೊರಟೆ. ಆ ದೊಡ್ಡ ಗಡಿಯಾರದ ಬಳಿ ಬಂದು ನಿಂತೆ. ಗಡಿಯಾರ ಹತ್ತಿ ಮೇಲಿನಿಂದ ಎಲ್ಲಾದರೂ ಕಾಣುವಳೇನೋ ಎಂದು ಹುಡುಕಿದೆ. ಅವಳು ಮುಂಚೆ ಕುಳಿತಿದ್ದ ಜಾಗದಲ್ಲೇ ಇನ್ನಾರೋ ಕುಳಿತಿರುವ ಹಾಗೆ ಕಂಡಿತು.

ಇವಳು ಮುಂಚಿನವಳಿಗಿಂತಲೂ ಸುಂದರವಾಗಿದ್ದಳು. ಅವಳ ಪಕ್ಕ ಇದ್ದ ಹಣ್ಣು ಹಂಪಲು ಬಾಡಿಹೋಗಿದ್ದವು. ಹೋದವಳು ಹೋದಳು, ಇವಳನ್ನಾದರೂ ಉಳಿಸಿಕೊಳ್ಳಬೇಕೆಂದು ಮನದಲ್ಲೇ ತೀರ್ಮಾನಿಸಿದೆ. ಗಡಿಯಾರದಿಂದ ಇಳಿದು ಮೊದಲು ಅವಳ ಬಳಿ ಹೋಗುವುದೆಂದು ಹೊರಟೆ. ಗಡಿಯಾರ ಮತ್ತೆ ಢಣ್… ಢಣ್…. ಢಣ್ ಎಂದು ಹೊಡೆದುಕೊಂಡಿತು. ಈ ಗಡಿಯಾರ ಬಡಿದುಕೊಂಡ ಹಾಗೆ ಇಲ್ಲಿ ಎಲ್ಲವೂ ಬದಲಾಗುತ್ತೆನಿಸುತ್ತೆ. ಈ ಬಾರಿಯೂ ಬಡಿದುಕೊಂಡಿತು, ಇವಳೂ ಕಳೆದುಹೋಗುವಳೇನೋ ಎಂದು ಹೆದರಿಕೆಯಾಯ್ತು. ಅವಳ ಕಡೆ ತಿರುಗಿದರೆ ಇನ್ನೂ ಅಲ್ಲೇ ಕುಳಿತಿದ್ದಳು. ಅವಳ ಬಳಿಗೆ ಓಡಿದೆ, ಇನ್ನೇನು ಅವಳನ್ನು ಸಮೀಪಿಸಬೇಕು ಕಾಣೆಯಾದಳು. ಹೊಟ್ಟೆ ಉರಿದುಹೋಯ್ತು. ಕ್ರೋಧ ಉಕ್ಕಿಬಂತು. ಈ ಗಡಿಯಾರದಿಂದಲೇ ಎಲ್ಲಾ ಆಗಿದ್ದು ಗಡಿಯಾರವನ್ನು ಒಡೆದುಹಾಕಬೇಕೆಂದು ಗಡಿಯಾರದ ಬಳಿ ನುಗ್ಗಿದೆ.

ಟಪ್.. ಟಪ್… ಟಪ್… ಎಂದು ದೊಡ್ಡದಾಗಿ ಸದ್ದು ಮಾಡುತ್ತಾ ಅದರ ದೈತ್ಯ ಮುಳ್ಳುಗಳು ಸುತ್ತಿ ಸುತ್ತಿ ಸುತ್ತುತ್ತಲೇ ಇದ್ದವು. ಸೆಕೆಂಡಿನ ಮುಳ್ಳಿನ ಮೇಲೆ ಹಾರಿ ಹಿಡಿದುಕೊಂಡೆ. ನಾನು ಅದಕ್ಕೆ ಜೋತುಬಿದ್ದರೂ ಅದು ಅದರ ಪಾಡಿಗೆ ಚಲಿಸುತ್ತಲೇ ಇತ್ತು. ಪ್ರತೀ ಬಾರಿ ಮುಂದೆ ಚಲಿಸುತ್ತಿದ್ದಂತೆಯೂ ಕೈಗಳು ಜಾರುತ್ತಿದ್ದವು. ಇದು ಹೀಗೆ ಅಗುವುದಲ್ಲ. ಬೇರೆಯೇ ಮಾರ್ಗ ಉಪಯೋಗಿಸಬೇಕು ಇದನ್ನು ನಿಲ್ಲಿಸಲಿಕ್ಕೆಂದು ಯೋಚಿಸುತ್ತಿದ್ದಂತೆಯೇ ಸೆಕೆಂಡಿನ ಮುಳ್ಳು ಹನ್ನೆರಡರ ಸಂಖ್ಯೆಯ ಕಡೆಗೆ ಚಲಿಸಲು ಶುರುವಾಯ್ತು. ಕೈ ಜಾರಿ ಅಲ್ಲಿಂದ ಬಿದ್ದರೆ ಪ್ರಾಣ ಉಳಿಯುವುದಂತೂ ಮರೆತುಬಿಡಬೇಕು. ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕೆಂದು ಸೆಕೆಂಡಿನ ಮುಳ್ಳು ಹನ್ನೊಂದರ ಹತ್ತಿರ ತಲುಪಿದ್ದೇ ಎಗರಿ ಹನ್ನೊಂದರ ಸಂಖ್ಯೆಯನ್ನು ಹಿಡಿಯಬೇಕೆಂದು ಯೋಜನೆ ಹಾಕಿ ಕಾದೆ. ಹನ್ನೊಂದರ ಹತ್ತಿರ ಬಂತು ಬಂತೇ ಬಂತು ಎಗರಿ ಸಂಖ್ಯೆಯನ್ನು ಹಿಡಿದೇಬಿಟ್ಟೆ ಎನ್ನುವಷ್ಟರಲ್ಲಿ ಜಾರಿ ಮೇಲಿಂದ ಬಿದ್ದು ಏಳರ ಸಂಖ್ಯೆಯ ಮೇಲೆ ಬಿದ್ದೆ. ಅದೆಷ್ಟು ಹೊತ್ತು ಬಿದ್ದಿದ್ದೆನೋ ಗೊತ್ತಿಲ್ಲ. ದೊಡ್ಡ ಮುಳ್ಳು ತಳ್ಳಿ ನನ್ನನ್ನು ಕೆಳಗೆ ಬೀಳಿಸಿದಾಗಲೇ ಎಚ್ಚರವಾಗಿದ್ದು. ಈ ಗಡಿಯಾರವನ್ನು ನಿಷ್ಕ್ರಿಯಗೊಳಿಸುವ ಬದಲು ಹಿಂದಕ್ಕೆ ಹಾಕಿದರೆ! ಆಲೋಚನೆ ಬಂದಿದ್ದೇ ಕಾರ್ಯಗತನಾದೆ. ದೊಡ್ಡ ದೊಡ್ಡ ಕಂಬಗಳಂತಿದ್ದ ಮೂರೂ ಮುಳ್ಳುಗಳನ್ನು ಎಳೆದೆಳೆದು ಶಕ್ತಿ ಮೀರಿ ಜಗ್ಗಿದರೂ, ಸಂಖ್ಯೆಗಳನ್ನು ಕಿತ್ತು ಎಡಗಡೆ ಇರುವುದನ್ನು ಬಲಗಡೆ, ಬಲಗಡೆ ಇರುವುದನ್ನು ಎಡಗಡೆ ಹಾಕಲು ಪ್ರಯತ್ನಿಸಿದರೂ, ಗಡಿಯಾರದ ಬ್ಯಾಟರಿ ಕಿತ್ತಲು ಪ್ರಯತ್ನಿಸಿದರೂ, ಗಡಿಯಾರ ನಿಲ್ಲಲೇ ಇಲ್ಲ. ಗಡಿಯಾರ ಹಿಂದಕ್ಕಂತೂ ಚಲಿಸುವುದಿಲ್ಲ, ಹೋಗಲಿ ಚಲನೆಯಾದರೂ ನಿಧಾನಗತಿಯಲ್ಲಿ ಹೋಗುವ ಹಾಗೆ ಏನಾದರೂ ಮಾಡಬಹುದೇನೋ ಪ್ರಯತ್ನಿಸಿದೆ. ಅದೂ ಸಾಧ್ಯವಾಗಲಿಲ್ಲ. ಹೋಗಲಿ ಒಡೆದೇ ಹಾಕಿಬಿಡೋಣ ಎಂದುಕೊಂಡೆ. ಒಡೆಯುವುದಿರಲಿ ಚೂರು ಊನವೂ ಆಗಲಿಲ್ಲ. ಮುಳ್ಳನ್ನೇ ಕಿತ್ತುಬಿಟ್ಟರೆ ಎಂದು ಹೊಸ ಉಪಾಯ ಹೊಳೆಯಿತು. ಕೇಂದ್ರಕ್ಕೆ ಹೋಗಿ ಎಳೆದೆ ಯಾವ ಸಾಹಸ, ದಾಳಿ, ಪ್ರಯತ್ನಗಳಿಗೂ ಜಗ್ಗಲಿಲ್ಲ. ಗಡಿಯಾರ ಸುತ್ತುತ್ತಲೇ ಇತ್ತು, ಸುತ್ತುತ್ತಲೇ ಇತ್ತು, ಸುತ್ತುತ್ತಲೇ ಇತ್ತು.

ಗಡಿಯಾರದ ಮೇಲೆಯೇ ಹತ್ತಿ ಹನ್ನೆರಡರ ಸಂಖ್ಯೆಯ ಮೆಲೆ ಸುಸ್ತಾಗಿ ಒರಗಿ ಕುಳಿತೆ. ಹಸಿವಿನಿಂದ ಮತ್ತೂ ನಿತ್ರಾಣವಾಗುವಂತಾಯಿತು. ಕೆಳಗೆ ಅದೇ ಸ್ಥಳದಲ್ಲಿ ಇನ್ನಾರೋ ಕುಳಿತಿರುವಂತಿತ್ತು. ಮೊದಲೇ ಮಸುಕು ಮಸುಕಾಗಿ ಕಾಣುತ್ತಿತ್ತು, ಅದರ ಮೇಲೆ ಕಣ್ಣುಗಳು ಬೇರೆ ಶಕ್ತಿ ಕಳೆದುಕೊಂಡಿದ್ದವು. ಸುಮ್ಮನೆ ನನ್ನ ಪಾಡಿಗೆ ನಾನು ಸಿಕ್ಕಿದ್ದ ಹಣ್ಣು ತಿಂದು, ಹಣ ಬಾಚಿಕೊಂಡು, ಸಿಕ್ಕಷ್ಟು ಸಮಯ ಅವಳೊಂದಿಗೆ ಸ್ನೇಹ ಬೆಳೆಸಿದ್ದರೆ ಆಗುತ್ತಿತ್ತು. ನನ್ನ ಕೈಲಾಗದ ಕೆಲಸಕ್ಕೆ ಕೈ ಹಾಕಿ ಸೋತೆನಷ್ಟೇ. ಎಲ್ಲ ಕಡೆಯಿಂದ ನಷ್ಟವಷ್ಟೇ. ನೋಡ ನೋಡುತ್ತಿದ್ದಂತೆ ಬೆಳಕು ಮಂದವಾಗುತ್ತಾ ಬಂತು. ಕತ್ತಲು ಎಲ್ಲೆಲ್ಲೂ ಆವರಿಸುತ್ತಲಿತ್ತು. ಇಲ್ಲಿ ಮೇಲಿನಿಂದ ಕೆಳಗೆ ಇಳಿಯುವುದಕ್ಕೂ ತ್ರಾಣವಿಲ್ಲ. ಹಣ ಹೆಣ್ಣು ಏನೂ ಬೇಕಿಲ್ಲ ಹೊಟ್ಟೆಗೆ ಏನಾದರು ಬಿದ್ದರೆ ಸಾಕಿತ್ತು. ಆದರೆ ಅಷ್ಟು ಕೆಳಗೆ ಹೋಗುವ ಬಗೆ ಹೇಗೆ. ಸಹಾಯಕ್ಕೂ ಯಾರೂ ಇಲ್ಲ. ಎಲ್ಲೂ ಏನೂ ಕಾಣದಂತಾಗಿ ಹೋಯ್ತು. ಮತ್ತೆ ಬೆಳಕು ಬರುವುದೋ ಇಲ್ಲವೋ ಗೊತ್ತಿಲ್ಲ. ಗಡಿಯಾರ ಮಾತ್ರ ಟಪ್.. ಟಪ್… ಟಪ್… ಎಂದು ಅದರ ಪಾಡಿಗೆ ತಿರುಗುತ್ತಲೇ ಇತ್ತು. 





+ನೀ.ಮ. ಹೇಮಂತ್

Sunday 5 August 2012

ಪ್ರಶ್ನೆ!

ಒಂದೇ ರಾತ್ರಿಯ ಹಲವು ಕನಸು




           ಡಿಯೂರಪ್ಪನವರು ನಗುತ್ತಿರುವ ಫೋಟೋ ಪಕ್ಕದಲ್ಲಿ ಸದಾನಂದ ಗೌಡರು ಅಳುತ್ತಿರುವ ಫೋಟೋ ಫ್ರೇಮುಗಳು ಸಾರ್ವಜನಿಕವಾಗಿ ಕಾಣುವಹಾಗೆ ಹಾಕಲಾಗಿತ್ತು. ಅರೆರೆ ಇದೇನಪ್ಪಾ ವಿಚಿತ್ರ ಅಂತ ತಲೆಕೆಡಿಸಿಕೊಂಡು ಅಲ್ಲೇ ಯಾರೋ ಸುಕ್ಕು ಸುಕ್ಕಾಗಿದ್ದ ಖಾದಿ ಬಟ್ಟೆ ಧರಿಸಿ ಫೋಟೋಗಳನ್ನು ನೋಡುತ್ತಿದ್ದವನ ಬಳಿ ಹೋಗಿ ಏನ್ ಸಾರ್ ಇದು ನಿಜ ಜೀವನದಲ್ಲಿ ಸತ್ಯವಾಗುವಂಥದ್ದನ್ನ ಹಾಕಿ ಸಾರ್ ಅಂದೆ. ಆತ ನನ್ನೆಡೆಗೆ ತಿರುಗುತ್ತಾನೆ ನೋಡಿದ್ರೆ ಯಡಿಯೂರರು. ಇದೇ ಹೊಸಾ ಫೋಟೋ ಕಣೋ ಹುಡುಗ ಇನ್ನು ಮೇಲೆ ಹೀಗೇನೇ ಅಂತಂದ್ರು. ನಾವು ಹಿಂದೆ ಮಾತನಾಡುವ ಜಾತಿಯಲ್ಲಿ ಹುಟ್ಟಿರುವವರು ಎದುರಿಗೆ ಏನೂ ಪ್ರತಿಕ್ರಿಯೆ ಅಥವಾ ಹಾಸ್ಯ ಮಾಡಲಾಗಲಿಲ್ಲ. ಸುಮ್ಮನೆ ನಿಂತಿದ್ದೆ ಸದನದ ಎಡಗಡೆಯ ಬಾಗಿಲಿನಿಂದ ಯಾರೋ ಇನ್ನೊಂದು ಅದೇ ಗಾತ್ರದ ಫೋಟೋ ಫ್ರೇಮ್ ಹಿಡಿದು ಒಳಗೆ ಓಡಿಬಂದರು. ಹಿಂತಿರುಗಿ ನೋಡಿದೆ ಇಡೀ ಸದನ ಖಾಲಿಯಾಗಿತ್ತು. ಅರೆರೆ ಸದಾನಂದ ಗೌಡರು ಕ್ಲೋಸಪ್ ಸ್ಮೈಲ್ ಕೊಟ್ಟಿರುವ ಫೋಟೋ. ನನಗೇ ಗೊತ್ತಿಲ್ಲದೇ ಇದೇನ್ ಸಾರ್ ಅಂತ ಬಾಯಿಂದ ಮಾತುಗಳು ಹೊರಗೆ ಬಿದ್ದುಬಿಟ್ಟವು. ಫೋಟೋ ಹಿಡಿದಿದ್ದವನು ಆ ಫೋಟೋ ತೆಗೆದು ಇನ್ನು ಮೇಲೆ ಇದೇ ಹಾಕಬೇಕಂತೆ ಅಂದಿದ್ದೇ ಅಳುಮೊಗ ತೆಗೆದು ನಗುಮೊಗದ ಫೋಟೋ ತಗುಲಿಹಾಕಿದ. ಶೆಟ್ಟರ್ ಫೋಟೋ ಬಂದಮೇಲೆ ಸದಾನಂದರ ಪಕ್ಕದ ಜಾಗದಲ್ಲಿ ಹಾಕು ನನ್ನ ಫೋಟೋಗೆ ಕೈ ಹಚ್ಚಿದರೆ ಯಾರ ಫೋಟೋ ಕೂಡ ಉಳಿಸೋದಿಲ್ಲ ಎಚ್ಚರಿಕೆ ಅಂತ ಆತನೆಡೆಗೆ ಮತ್ತು ನನ್ನೆಡೆಗೆ ನೋಡಿ ಖಾಲಿ ಸದನದಲ್ಲೇ ಹೋಗಿ ಕುಳಿತರು ಯಡಿಯೂರರು. ಇಬ್ಬರೂ ಜಾಗ ಖಾಲಿ ಮಾಡಿದ ನಂತರ ಅಲ್ಲೇ ಅದೇ ಫೋಟೋ ಕೆಳಗೆ ನಗಬೇಕೋ, ಅಳಬೇಕೋ, ಕುಪಿತನಾಗಬೇಕೋ, ನಿರ್ಲಕ್ಷಿಸಿ ನನ್ನ ಪಾಡಿಗೆ ಹೊರಟುಹೋಗಬೇಕೋ, ಇನ್ನಾರಬಳಿಯಾದರೂ ಹಂಚಿಕೊಂಡು ಬಾಯಿಚಪಲ ತೀರಿಸಿಕೊಳ್ಳಬೇಕೋ ಏನೂ ತೀರ್ಮಾನಿಸಲಾಗದೇ ಸುಮ್ಮನೆ ನಿಂತೇ ಇದ್ದೆ.

ನೀವೆಲ್ಲಾ ಒಂದೇ ತರಹ ಕಾಣಿಸುತ್ತಿದ್ದೀರಾ ನನಗೆ. ಒಳ್ಳೇ ಹೊಸದಾಗಿ ಚೈನಾದವರನ್ನೋ, ವೆಸ್ಟ್ ಇಂಡೀಸ್ ಅವರನ್ನೋ ನೋಡಿದಾಗ ಎಲ್ಲಾ ಒಂದೇ ತರಹ ಇದ್ದಾರೆ ಅನ್ನಿಸೋದಿಲ್ವಾ ಹಾಗೇ ಅನ್ನಿಸುತ್ತಿದೆ ಅಂದದ್ದಕ್ಕೆ ನಗುತ್ತಲೇ ಉತ್ತರಿಸಿದರು. ನಮಗೂ ಅಷ್ಟೇ ಎಲ್ಲರೂ ಒಂದೇ ರೀತಿ ಕಾಣ್ತೀರಿ ಯಾವ ಬೇಧವೂ ಕಾಣೋಲ್ಲ ಯಾರಲ್ಲೂ, ಅಂತಂದರು.   ನಾನೂ ಒಮ್ಮೆ ಮುಗುಳ್ನಕ್ಕು ಇಡೀ ಕೊಠಡಿಯಲ್ಲಿ ನಿಂತು ಮಾತುಕತೆಗಳನ್ನು ಮುಂದುವರೆಸಿದ್ದ ಎಲ್ಲಾ ಒಂದೇ ರೀತಿಯ ಜನರನ್ನು ನೋಡಿದೆ. ಮತ್ತೆ ತಲೆಯಲ್ಲಿ ಒಂದು ಪ್ರಶ್ನೆ ಹುಟ್ಟಿತು. ನಾನು ಮಾತನಾಡಿಸುತ್ತಿದ್ದ ನನ್ನೆದುರಿನ ವ್ಯಕ್ತಿಯನ್ನೇ ಪ್ರಶ್ನಿಸಿದೆ. ಸಾರ್ ದಯವಿಟ್ಟು ತಪ್ಪು ತಿಳೀಬೇಡಿ, ನಿಮ್ಮ ಹೆಸರೇನು? ಎಂದೆ. ಈಶ್ವರ ಎಂದರು. ಹಾಗಾದರೆ ನಿಮ್ಮ ಪಕ್ಕದಲ್ಲಿರುವವರು ಪಾರ್ವತಿನಾ ಅಂದೆ. ಅಲ್ಲಾ ಗಂಗೆ ಅಂದ್ರು ಒಂದು ನಮಸ್ಕಾರ ಮಾಡಿದೆ. ಪ್ರತಿನಮಸ್ಕಾರ ಸ್ವೀಕರಿಸಿ ಮತ್ತೆ ಈಶ್ವರ ಅವರ ಕಡೆ ತಿರುಗಿ, ಮತ್ತೆ ನಿಮ್ಮ ತ್ರಿಶೂಲ, ಹಾವು, ವಿಭೂತಿ, ತೊಗಲು ಬಟ್ಟೆ ಇವೆಲ್ಲಾ.. ಎಂದು ಅಳುಕುತ್ತಲೇ ಕೇಳಿದ್ದಕ್ಕೆ ಗಂಗೆಯ ಮುಖ ಒಮ್ಮೆ ನೋಡಿ ಹಸನ್ಮುಖಿಯಾಗಿಯೇ ನೀನು ಪದವಿ ಮುಗಿದ ಮೇಲೆ ಗ್ರಾಡ್ಯುಯೇಷನ್ ದಿನದಂದು ಗೌನು ಟೊಪ್ಪಿ ಎಲ್ಲಾ ಧರಿಸಿರುತ್ತೀರಲ್ಲಾ ಅದನ್ನೇ ಯಾವಾಗಲೂ ಯಾಕೆ ಧರಿಸಿರುವುದಿಲ್ಲ ಎಂದರು. ಹಿ ಹಿ ಹಿ ಎಂದು ಬೆಪ್ಪನಂತೆ ನಕ್ಕೆ ಮತ್ತು ಆದರೆ ನಿಮ್ಮನ್ನ ಯಾವ ಚಿತ್ರಪಟದಲ್ಲಿ ನೋಡಿದ್ರೂ ಎಲ್ಲಾ ಕಲಾವಿದರೂ ನಿಮ್ಮನ್ನ ಹಾಗೇ ರಚಿಸಿರುತ್ತಾರೆ ಯಾವ ಸಿನಿಮಾದಲ್ಲಿ, ಟಿವಿ ಸೀರಿಯಲ್ಲು ನಾಟಕ ಯಾವುದರಲ್ಲಿ ಯಾವ ಸಮಯದಲ್ಲಿ ನೋಡಿದರೂ ಸಹ ಹಾಗೇ ಷೋಕೇಸ್ ಮಾಡಲಾಗುತ್ತದೆ ಅದಕ್ಕೇ ಕೇಳಿದೆ ಎಂದೆ. ಕ್ಲೀಷೆ…ಕ್ಲೀಷೆ ಎಂದು ಸುಮ್ಮನಾದರು. ನನ್ನೆದುರಿಗೆ ನಿಂತಿರುವ ನೀವುಗಳು ಒಂದೇ ರೀತಿ ಇದ್ದೀರಿ ಯಾರು ರಾಮ, ಯಾರು ಕೃಷ್ಣ, ಯಾರು ಗಣೇಶ ಎಂದು ಒಂದೂ ಗೊತ್ತಾಗುತ್ತಿಲ್ಲ, ನಿಮ್ಮನ್ನ ದೇವರೆಂದರೆ ನಮ್ಮಲ್ಲಿ ಯಾರೂ ನಂಬುವುದಿಲ್ಲ ಎಂದು ಎಲ್ಲರಿಗೂ ಕೇಳುವ ಹಾಗೆಯೇ ಹೇಳಿದೆ. ನಾವುಗಳು ದೇವರೆಂದು ನಿಮಗೆ ನಂಬಿಕೆ ಬರುವುದೋ ಇಲ್ಲವೋ ಗೊತ್ತಿಲ್ಲ, ನೀವಂತೂ ನಮ್ಮ ಪಾಲಿನ ದೇವರುಗಳು ಎಂದು ಸರ್ವಾನುಮತದಿಂದ ಒಪ್ಪಿಕೊಂಡರು. ಹೌದು ಹೌದು ಎಲ್ಲಾ ದೇವರುಗಳೂ ಒಪ್ಪಿಗೆ ಸೂಚಿಸುತ್ತಿದ್ದರು.



ಕಾಸರವಳ್ಳಿ ಸಾರ್ ಮುಂದೆ ಮುಂದೆ ನಡೆದುಕೊಂಡು ಹೋಗ್ತಾ ಇದ್ರು. ನಾನು ಒಂದು ಕ್ಯಾಮೆರಾ ನನ್ನ ಪಕ್ಕದಲ್ಲಿ ಪರಮ ಒಂದು ಚಿತ್ರಕಥೆಯ ಹಾಳೆಗಳು ಕೈಲಿ ಹಿಡಿದು ಅವರ ಹಿಂದೆ ಹಿಂದೆ ಹುಲ್ಲಿನ ರಾಶಿಯಲ್ಲಿ ದಾರಿ ಮಾಡಿಕೊಂಡು ನಡೆದುಕೊಂಡು ಹೋಗುತ್ತಿದ್ದೆವು. ಮಗಾ ಇದು ಕೂಡ ತೀರಾ ಕಲಾತ್ಮಕ ಚಿತ್ರದ ತರಹಾನೇ ಇಲ್ವೇನೋ ಅಂತ ನಾನು ಕೇಳೀದ್ರೆ ಇವರು ಕಮರ್ಷಿಯಲ್ ಮಾಡಲ್ಲ ಮಗಾ, ಗೊತ್ತಿರೋದೇ ಅಲ್ವಾ ಅಂತ ಪರಮ. ಕಾಸರವಳ್ಳಿಯವರು ನೋಡಿದ್ರೆ ಅವರ ಪಾಡಿಗೆ ಕೈ ಹಿಂದೆ ಕಟ್ಟಿಕೊಂಡು ದಾರಿ ಮಾಡಿಕೊಂಡು ನಡೆಯುತ್ತಲೇ ಇದ್ರು. ಹಿಂದಿನಿಂದ ಅವರ ಕನ್ನಡಕದ ದಾರ ಅವರ ನಡಿಗೆಯೊಂದಿಗೆ ಅತ್ತ ಇತ್ತ ಓಲಾಡುತ್ತಿದ್ದುದು ಕೂಡ ಸ್ಪಷ್ಟವಾಗಿ ಕಾಣುತ್ತಲಿತ್ತು. ಮತ್ತೆ ಪರಮನ ಕಡೆ ತಿರುಗಿ, ಆದರೆ ಸ್ಕ್ರಿಪ್ಟ್ ನಲ್ಲಿ ಎಂಥಾ ಗಟ್ಟಿತನ ಇದ್ಯೋ ಲೋ. ಹ್ಯಾಟ್ಸ್ ಆಫ್ ಕಣೋ ಅವರಿಗೆ ಈ ಸ್ಕ್ರಿಪ್ಟ್ ನಲ್ಲಿರುವ ಮಜಾ ಕಮರ್ಷಿಯಲ್ ಸಿನಿಮಾಗಳಲ್ಲಿ ನಿಜವಾಗಲೂ ಸಿಗಲ್ಲ ಕಣೋ ಅಂದೆ. ನಾನು ಆ ಸಣ್ಣ ಕಥೆ ಕೂಡ ಓದಿದ್ದೀನಿ ಕಣೋ ಓದಿದಾಗ ಇದರಲ್ಲಿ ಸಿನಿಮಾ ಮಾಡೋಕೇನಿಲ್ಲಾ ಅಂತ ಅಂದುಕೊಂಡೆ, ಹಾ, ಅದು ನಮ್ಮ ತಲೆಗೆ ಹಾಗೇ ಅನಿಸಬೇಕಾದ್ದೇ ಬಿಡು ಆದರೆ ಈ ಸ್ಕ್ರಿಪ್ಟ್ ನೋಡಿದ ಮೇಲೆ ಅನಿಸ್ತಾ ಇದೆ ಕಾಸರವಳ್ಳಿ ಕಾಸರವಳ್ಳಿ ಯಾಕೆ ಆಗ್ತಾರೆ ಅಂತ ಅಂದ. ಅದೇನೋ ನಿಜ ಲೇ ಭಟ್ಟರ ಕಪರ್ಷಿಯಲ್ ಅಂಶದ ಹತ್ತು % ಆದರೂ ಇವರು ಅಳವಡಿಸಿಕೊಂಡು ಸ್ಕ್ರಿಪ್ಟ್ ಮಾಡ್ಬಿಟ್ರೆ ಕರ್ನಾಟಕದಲ್ಲಿ ಇವರ ಸಿನಿಮಾದ ರುಚಿ ನೋಡಿದ ಜನ ಬೇರೆ ಸಿನಿಮಾಗಳನ್ನ ಮೂಸಿ ಕೂಡ ನೋಡೋದಿಲ್ಲ ಅಷ್ಟೇ, ಆದರೆ ಈ ಮಟ್ಟಿಗಿನ ನೈಜತೆ, ಆ ಸೊಗಡನ್ನ, ಸದಭಿರುಚಿಯನ್ನ ಉಳಿಸಿಕೊಂಡು ಮತ್ತೆ ಕಮರ್ಷಿಯಲ್ ಮಾಡೋಕೋಸ್ಕರ ಬೇರೆ ಅಂಶಗಳನ್ನ ತುರುಕಿದರೆ ಈ ಸಿನಿಮಾನೇ ಕೆಟ್ಟು ಹೋಗುತ್ತೆ ಅಷ್ಟೇ. ಹಾಗೆ ನೋಡಿದರೆ ಇವರು ಇವರ ದಾರೀಲೇ ಸರಿ ಇದಾರೆ ಅನಿಸುತ್ತೆ ಕಣೋ ಅದು ಇದು ಅಂತ ನಮ್ಮ ನಮ್ಮಲ್ಲೇ ಮಾತು ನಡೆದೇ ಇತ್ತು. ಕಾಸರವಳ್ಳಿಯವರು ಚೂರೇ ಚೂರು ಹಿಂದೆ ನಮ್ಮ ಕಡೆ ತಿರುಗಿ ನಕ್ಕ ಹಾಗೆ ಕಂಡ್ರು. ನಾವು ಮಾತು ನಿಲ್ಲಿಸಿ ಹಿಂದೆ ಮುಂದುವರೆದೆವು. ಅವರು ಹುಲ್ಲಿನ ರಾಶಿಯಲ್ಲಿ ದಾರಿ ಮಾಡಿಕೊಂಡು ನಡೆಯುತ್ತಲೇ ಇದ್ರು.

ಕೈಯಲ್ಲೊಂದು ಕಂಡೋಮ್ ಪ್ಯಾಕೆಟ್ ಇತ್ತು. ಎದುರುಗಡೆ ದೂರದಲ್ಲಿ ಖಾಲಿ ಬಿಳಿ ಬಣ್ಣ ಹೊದ್ದಿರುವ ಗೋಡೆಯಲ್ಲಿ ಒಂದು ಬಿಳಿ ಬಣ್ಣದ್ದೇ ಬಾಗಿಲು ಕೂಡ ಮುಚ್ಚಿಕೊಂಡಿತ್ತು. ನಾನು ಕುಳಿತಿರುವ ಮಂಚದ ಮೇಲಿನ ಬಿಳಿ ಬಣ್ಣದ ಬಟ್ಟೆ ಕೂಡ ತೆಪ್ಪಗೆ ಸುಕ್ಕಾಗದೆ ಹಾಸಿಗೆಯ ಮೇಲೆ ಹಾಸಿಕೊಂಡಿತ್ತು. ನನ್ನ ಮೈಯಲ್ಲಂತೂ ಒಂದು ಇಂಚು ಕೂಡ ಬಟ್ಟೆ ಇರಲಿಲ್ಲ. ದೇಹದ ಸಮಸ್ತ ಸಾಮಾನುಗಳೂ ಪರೀಕ್ಷೆಗೆ ಕಾದಿರುವಂತೆ ಒಂದು ರೀತಿಯ ಟೆನ್ಶನ್, ಚಡಪಡಿಕೆ, ಅಳುಕು, ಕೊಂಚ ಭಯ, ಬಹಳಷ್ಟು ಆಸೆ, ಕಾತುರ, ಉದ್ವೇಗ, ನಿರೀಕ್ಷೆ, ಕುತೂಹಲ ಎಲ್ಲದರ ಮಿಶ್ರಣವಾಗಿ ತಲೆ ಜೊತೆಗೆ ಮಂಚದ ಪಕ್ಕದ ನೂರಿಪ್ಪತ್ತು ಸೆಕೆಂಡುಗಳುಳ್ಳ ಕೈಗಡಿಯಾರದ ಮುಳ್ಳುಗಳು ನಿಧಾನ ಗತಿಯಲ್ಲಿ ಚಲಿಸುತ್ತಿದ್ದವು ಇದ್ದಕ್ಕಿದ್ದಂತೆ ನಿಂತೇ ಹೋದವು. ಕಣ್ಣಿನ ಗೋಲಿಗಳು ಮಾತ್ರ ಒಮ್ಮೆ ಮುಚ್ಚಿದ ಬಾಗಿಲಿನೆಡೆಗೆ ಮತ್ತೊಮ್ಮೆ ಸ್ಥಗಿತವಾಗಿರುವ ಕಾಲದ ಸೂಚಕ ಕೈಗಡಿಯಾರದೆಡೆಗೆ ನೋಡುತ್ತಲಿಹುದು ಉಸಿರು ಹೆಚ್ಚುತ್ತಲಿಹುದು. ಗೋಲಿಗಳು ಅತ್ತ ಇತ್ತ ಅತ್ತ ಇತ್ತ ಅತ್ತ ಇತ್ತ ಸುತ್ತುತ್ತಿದ್ದಂತೆ ಕೈಯಲ್ಲಿದ್ದ ಪ್ಯಾಕೆಟ್ಟು ಸರಕ್ಕನೆ ಹರಿದು ಒಳಗಿದ್ದ ಅಂಟಂಟು ಕಂಡೋಮು ಕೈಗೆ ಬಂತು. ಮುಟ್ಟಿದ್ದೇ ಅಸಹ್ಯ. ಕೈಲಿ ಹಿಡಿಯಲಾಗದೆ ಬಿಳಿ ಹಾಸಿಗೆಯ ಮೇಲೆ ಹಾಕಿಬಿಟ್ಟೆ. ಅಯ್ಯಯ್ಯಾ ಇದನ್ನ ಮುಟ್ಟೋಕೇ ಒಂಥರಾ ಇದೆ ಇನ್ನ ಹಾಕಿಕೊಳ್ಳೋದು ಹೆಂಗೆ ಅಂತ. ಹ್ಯಾಗೆ ಇದನ್ನ ಬಳಸ್ತಾರೋ ಜನ. ಮುಖ ಕಿವುಚಿಕೊಂಡಿದ್ದು ಹಂಗೇ ಇತ್ತು. ಮತ್ತೊಮ್ಮೆ ಮುಚ್ಚಿಕೊಂಡು ಮಲಗಿಯೇ ಬಿಟ್ಟಿದ್ದ ಬಾಗಿಲೆಡೆಗೆ ನೋಡಿ ಸಾಹಸಪಟ್ಟು ಕೈಲಿ ಹಿಡಿದೆ. ಈ ಬಾರಿ ಅಷ್ಟೇನೂ ಅಸಹ್ಯವೆನಿಸಲಿಲ್ಲ. ಆದರೆ ನನ್ನ ಕಣ್ಣುಗಳೇಕೆ ಪದೇ ಪದೇ ಬಾಗಿಲೆಡೆಗೆ ನೋಡುತ್ತಲಿದೆ ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಯಾರಾದರೂ ಬರುವುದರಲ್ಲಿದ್ದಾರಾ? ನಾನು ಈ ವೇಷದಲ್ಲಿ ಯಾರನ್ನಾದರೂ ಕಾಯುತ್ತಲಿದ್ದೇನಾ? ನನ್ನ ಕೈಯಲ್ಲಿ ಕಂಡೋಮ್ ಯಾತಕ್ಕೆ ಬಂತು? ನಾನು ಹೀಗೆ ಯಾಕೆ ಕುಳಿತಿದ್ದೇನೆ? ನಾನಿರುವುದಾದರೂ ಎಲ್ಲಿ? ಗೋಡೆ, ಬಾಗಿಲು ಸಹಿತ ಇಡೀ ಕೋಣೆ, ಗಡಿಯಾರ, ಹಾಸಿಗೆ, ಮಂಚ, ಬಟ್ಟೆ ಎಲ್ಲವೂ ಬಿಳಿ ಬಿಳಿ ಇರುವುದರ ಅರ್ಥವಾದರೂ ಏನು? ನನ್ನಲ್ಲಿ ಆ ಎಲ್ಲಾ ಮಿಷ್ರ ಭಾವನೆಗಳು ಹುಟ್ಟುತ್ತಿದ್ದದ್ದಾದರೂ ಯಾಕೆ?

ಬಾಗಿಲು ಕಿರ್ರನೆ ತೆರೆದುಕೊಂಡಿತು!

ಈ ಕನಸುಗಳಿಗೆ ಏನು ಅರ್ಥವೋ ನಾಕಾಣೆ. ಒಂದಕ್ಕೊಂದಕ್ಕೆ ಸಂಬಂಧವಂತೂ ಯಾವ ದಿಕ್ಕಿನಿಂದಲೂ ಕಾಣುವುದಿಲ್ಲ. ಆದರೆ ಒಂದರ ನಂತರ ಒಳ್ಳೆ ಸೀರಿಯಲ್ ಎಪಿಸೋಡಿನಂತೆ ಬಂದಿತ್ತು. ಸುಮ್ಮನೆ ಹಾಗೇ ಬಂದವೋ ಅಥವಾ ಒಂದು ದಿನದಲ್ಲಿ ನಾವು ಯಾವುದಾವುದರ ಬಗ್ಗೆ ಚಿಂತಿಸುತ್ತೀವೋ, ಚರ್ಚಿಸಿರುತ್ತೇವೋ, ನಮ್ಮ ಸಮಯವನ್ನ ಯಾವುದಕ್ಕೆ ವ್ಯತ್ಯಯ ಮಾಡಿರುತ್ತೇವೋ ಅದಕ್ಕನುಸಾರವಾಗಿ ಕನಸುಗಳು ಬಿದ್ದಿರಬಹುದು ಎಂದುಕೊಂಡೆ. ಇದನ್ನು ಕಥೆ ಎಂದು ಕರೆಯಲಾಗುವುದಿಲ್ಲ. ಆದರೂ ಈ ಕನಸಿನ ಅಬ್ಸ್ಟ್ರಾಕ್ಟ್ ವಿಚಾರಗಳಲ್ಲಿ ಏನೋ ಹೇಳದಿರುವ ವಿಚಾರಗಳು ಇವೆ ಎಂದು ಕಂಡಿತು. ಈ ಕನಸುಗಳು ಯಥಾವತ್ ಹೀಗೇ ಬಿದ್ದವೆಂದು ಹೇಳಬರುವುದಿಲ್ಲ. ಆದರೂ ನೆನಪಿದ್ದಷ್ಟೂ ಅದಕ್ಕೆ ಅಕ್ಷರ ರೂಪ ಕೊಡಲಾಗಿದೆ. ಕಥೆಗೊಂದು ಶುರು, ಅಂತ್ಯ, ಯಾವುದೂ ಇಲ್ಲ ಒಂದಕ್ಕೊಂದು ಕೊಂಡಿಯೂ ಇಲ್ಲ ಸುಮ್ಮನೆ ವಕ್ಕರ ವಕ್ಕರವಾಗಿ ಹೆಂಗೆಂಗೋ ಇವೆ. ಹಿಂಗೇ ಬರೆದರೆ ಏನಾಗಬಹುದೆಂದು ಕೂಡ ಗೊತ್ತಿಲ್ಲ. ತಿಕ್ಕಲು ಆಲೋಚನೆಗಳೊಂದಿಗೆ ಮಲಗಿದರೆ ತಿಕ್ಕಲು ಕನಸುಗಳು ಅಷ್ಟೇ ತಿಕ್ಕಲು ರೀತಿಯ ನಿರೂಪಣೆ. ಒಟ್ಟಂದದಲ್ಲಿ ಏನಾದರೂ ತಲುಪಿಸುವವೇನೋ ಎಂಬೊಂದು ಆಶಯದ “ಪ್ರಶ್ನೆ”.







+ನೀ.ಮ. ಹೇಮಂತ್

ಕರ್ಮ!



ನನ್ನ ಹೆಸರು ಶರಣ್
ನನ್ನ ಹೆಸರು ಶರಣ್, ನಾನು…
ನನ್ನ ಹೆಸರು ಶರಣ್, ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ.. ಕ್ಷಮಿಸಿ.. ಅಂಬೇಡ್ಕರ್ ಕಾಲೇಜಿನಲ್ಲಿ ಎಮ್. ಬಿ. ಎ ಪದವಿ ಮುಗಿಸಿದ್ದೇನೆ.
ನಾನು… ನಾನು… ನನ್ನ ಗಂಟಲಿನಲ್ಲಿ ನೂರು ಜನ ಸೇರಿಕೊಂಡು ನನ್ನ ಮುಂದಿನ ಪದಗಳನ್ನು ಹೊರಬರದಂತೆ ಹಿಡಿದು ಹಿಂದಕ್ಕೆ ಎಳೆಯುತ್ತಿದ್ದರು. ಏನು ಹರಸಾಹಸ ಪಟ್ಟರೂ ಪದಗಳು ಹೊರಬರಲೇ ಇಲ್ಲ. ಶಕ್ತಿ ಮೀರಿ ಪ್ರಯತ್ನ ಪಟ್ಟಷ್ಟೂ ಬೆವರು ಹೊರಬರುತ್ತಿತ್ತೇ ಹೊರತು ಪದಗಳು ಹೊರಬರಲಿಲ್ಲ.

ಸರಿ ವಂದನೆಗಳು ನೀವು ಕುಳಿತುಕೊಳ್ಳಿ. ನೆಕ್ಸ್ಟ್ ಎಂದರು. ನಾನು ಕೂರುವ ಮುನ್ನವೇ ನನ್ನ ಪಕ್ಕದವನು ಸರಕ್ಕನೆ ಎದ್ದು ನಿಂತು ಬಾಯಿ ಪಾಠ ಮಾಡಿದ್ದೆಲ್ಲವನ್ನೂ ಒಪ್ಪಿಸಲು ಶುರುಮಾಡಿದ. ನನ್ನೊಳಗೆ ಪದಗಳನ್ನೆಲ್ಲಾ ಹಗ್ಗ ಕಟ್ಟಿ ಜಗ್ಗುತ್ತಿದ್ದವರೇ ಕೊನೆಗೂ ಗೆದ್ದು ಕೇಕೆ ಹಾಕಲು ಶುರುಮಾಡಿದರು. ಸೋತಿದ್ದಕ್ಕೋ ಏನೋ ಕೈಗಳು ತೀಕ್ಷ್ಣವಾಗಿ ಕಂಪಿಸುತ್ತಿದ್ದವು. ಒಳಗೆ ನನ್ನ ಆತ್ಮವಿಶ್ವಾಸದೊಂದಿಗೆ ಯುದ್ಧ ಮಾಡುತ್ತಿದ್ದವರಿಂದಲೂ, ಮತ್ತು ನನ್ನೊಂದಿಗೆ ಸ್ಪರ್ಧಿಸಿ ಕೆಲಸ ಕಿತ್ತುಕೊಳ್ಳಲು ಬಂದಿದ್ದವರಿಂದಲೂ ಒಂದೇ ಬಾರಿಗೆ ಸೆಣಸಲಾಗದೇ ಸೋತು ಕುಳಿತು ಕಷ್ಟ ಪಟ್ಟು ಎಂಜಲು ನುಂಗಿದೆ. ಗೊತ್ತಾಗೋಯ್ತು ಈ ಕಂಪನಿ ನನಗೆ ಕೆಲಸ ಕೊಡುವುದಿಲ್ಲ ಎಂದು. ಆದರೂ ಅವರೇ ಕಳುಹಿಸುವವರೆಗೂ ಕಾಯಬೇಕಿತ್ತು. ಎಲ್ಲರ ಸರದಿ ಮುಗಿದ ನಂತರ ಒಂದಷ್ಟು ಜನರ ಪಟ್ಟಿ ಓದಿದರು, ಯಾರ ಹೆಸರನ್ನು ಕರೆಯಲಾಗಲಿಲ್ಲವೋ ಅವರು ಇನ್ನು ಹೊರಡಬಹುದು. ಮತ್ತೆ ಮೂರು ತಿಂಗಳ ನಂತರ ಸ್ಪರ್ಧಿಸಲು ನೀವು ಅರ್ಹರು. ಮುಂದಿನ ಬಾರಿಗೆ ಶುಭವಾಗಲಿ ಎಂದು ಹರಸಿ ಮರ್ಯಾದೆಯಿಂದಲೇ ಕಳುಹಿಸಿದರು. ಯಾವಾಗ ಎದ್ದು ಓಡಿಬರುವೆನೋ ಎಂದೆನಿಸಿತ್ತು. ಬಿಟ್ಟಿದ್ದೇ ಸಾಕೆಂದು ಮೊದಲು ಸೋತವರ ಗುಂಪಿನಿಂದ ದೂರ ಓಡಿ ಬಂದು ಸುಧಾರಿಸಿಕೊಂಡೆ. ಇದು ಕಳೆದ ಬಾರಿಯ ಅನುಭವ. ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಒಂದು ಕಂಪನಿಯಲ್ಲಿ ಕೆಲಸ ಗಿಟ್ಟಿಸಲು ನನ್ನಿಂದ ಸಾಧ್ಯವಾಗುವುದಿಲ್ವಾ? ಅಷ್ಟು ಕಷ್ಟ ಏನಿದೆ, ಕೆಲಸ ಗಿಟ್ಟಿಸೋದು. ಹೆದರುವುದಕ್ಕೆ ಅಲ್ಲಿ ಅಂಥದ್ದೇನೂ ಇಲ್ವಲ್ಲ. ಸ್ವಲ್ಪ ಧೈರ್ಯವಾಗಿ ಗೊತ್ತಿರುವುದನ್ನ ಗೊತ್ತಿರುವ ಹಾಗೇ ಹೇಳಿದರೆ ಮುಗಿದು ಹೋಯಿತು. ಕೆಲಸ ಸಿಕ್ಕ ಹಾಗೆಯೇ. ಈ ಬಾರಿ ಹೇಗಾದರೂ ಮಾಡಿ ಕೆಲಸ ಹೊಡೆಯಲೇ ಬೇಕು. ನನಗಿಂತ ಅರ್ಧಂಬರ್ಧ ಇಂಗ್ಲೀಷಿನಲ್ಲಿ ಮಾತನಾಡುವವರೆಲ್ಲಾ ಕೆಲಸ ಪಡೆದರು ಕೊನೆಯ ಬಾರಿ. ಈ ಸಲ ಏನೇ ಆಗಲಿ ಮಾತನಾಡಬೇಕು.

ಕೆಲಸ ಬೇಕು, ಕೆಲಸ ಬೇಕು, ಕೆಲಸ ಬೇಕು, ಕೆಲಸ ಬೇಕು.. ನೂರು ಬಾರಿ ಹೇಳಿಕೊಂಡದ್ದಾಯ್ತು. ಇಂಟರ್ ವ್ಯೂ ಗೆ ಇನ್ನೂ ಅರ್ಧ ಘಂಟೆ ಬಾಕಿ ಇದೆ. ಧರಿದ್ರದ್ದು ನನ್ನ ಬಗ್ಗೆಯ ಪರಿಚಯ ಬರೆದುಕೊಂಡಿರುವುದನ್ನ ಉರು ಹೊಡೆದಾದ್ರೂ ಹೇಳಬೇಕೀಸಲ.

ನಾನು ಶರಣ್ ನಾನು ಅಂಬೇಡ್ಕರ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದೇನೆ. ಎಮ್. ಬಿ. ಎ ನಲ್ಲಿ ಫಿನಾನ್ಸ್ ನನ್ನ ಐಚ್ಛಿಕ ವಿಷಯ. ನಾನು ಹುಟ್ಟಿ ಬೆಳೆದದ್ದು, ನೆಲೆಸಿರುವುದು ಬೆಂಗಳೂರಿನಲ್ಲೆ. ನನ್ನ ಮನೆಯಲ್ಲಿ ನನ್ನ ತಂದೆ ತಾಯಿ ಮತ್ತು ತಮ್ಮನಿದ್ದಾನೆ. ನಾನು ಎರಡು ವರ್ಷದ ಡಿಪ್ಲೊಮಾ ಕಂಪ್ಯೂಟರ್ ಕೋರ್ಸ್ ಮಾಡಿಕೊಂಡಿದ್ದೇನೆ. ಟೈಪಿಂಗ್ ಜೂನಿಯರ್ ನಲ್ಲಿ ಮೊದಲ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದೇನೆ. ನಾನು ಎರಡು ವರ್ಷ ಎನ್ ಸಿ ಸಿ ಯಲ್ಲಿ ಅಭ್ಯರ್ತಿಯಾಗಿದ್ದೆ. ಮತ್ತು ಮೂರು ಎನ್ ಎಸ್ ಎಸ್ ಕ್ಯಾಂಪ್ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಅದು ಬಿಟ್ಟರೆ ಸಾಹಿತ್ಯ ಓದುವುದು, ಅಂತರರಾಷ್ಟ್ರೀಯ ಉತ್ತಮ ಚಲನಚಿತ್ರಗಳನ್ನ ಸಂಗ್ರಹಿಸುವುದು ಮತ್ತು ನೋಡುವುದು ನನ್ನ ಇತರೆ ಆಸಕ್ತಿಯ ಹವ್ಯಾಸಗಳು. ನಾನು ಶ್ರಮಜೀವಿ, ಹಠವಾದಿ, ಹೊಸ ವಿಷಯಗಳನ್ನ ಬಹುಬೇಗ ಗ್ರಹಿಸಬಲ್ಲೆ…. ಇಷ್ಟನ್ನ ಒಳಗೆ ಹೋಗುವವರೆಗೂ ಉರು ಹೊಡೆಯಬೇಕು. ಛೆ ನನ್ನ ಬಗ್ಗೆ ನಾನೇ ಹೀಗೆ ಬಾಯಿಪಾಠ ಮಾಡಿ ಕಲಿಯಬೇಕಾ. ನಾನು ಬೇರೆಯವರ ಬಗ್ಗೆ ಹೇಳ್ತಿದ್ದೀನೋ ಅಥವಾ ನನ್ನ ಬಗ್ಗೆಯೇ ಹೇಳ್ತಿದ್ದೀನೋ. ಕೆಲಸ ಸಿಗೋದಕ್ಕೆ ಏನೇನು ಮಾಡಬೇಕಪ್ಪಾ. ಒಮ್ಮೆ ಕೆಲಸ ಗಿಟ್ಟಿಸಿದರೆ ಸಾಕು ಆಮೇಲೆ ನನ್ನ ಸಾಮರ್ಥವೇನೆಂದು ಸಾಬೀತು ಪಡಿಸಬಹುದು. ನನಗೆ ಗೊತ್ತಿದ್ದ ಹಾಗೆ ಕೆಲಸ ಅಷ್ಟು ಕಷ್ಟಕರವಾಗಿರಲಾರದು. ಕಷ್ಟಕರವಾಗಿಯೇ ಇದ್ದರೂ ಏನೀಗ, ಕಷ್ಟ ಪಟ್ಟು ದುಡಿಯಲು ನಾನೆಂದೂ ಹೆದರಿದವನಲ್ಲವಲ್ಲ. ಯಾಕೋ ಇವತ್ತು ಕೆಲಸ ಸಿಕ್ಕೇ ಸಿಗುತ್ತೆ ಅನ್ನಿಸುತ್ತಿದೆ. ನೋಡುವ, ಇವತ್ತು ನನ್ನ ಅದೃಷ್ಟ ಹೇಗಿದೆ ಅಂತ. ಥು ಆಲೋಚನೆ ಎಲ್ಲೆಲ್ಲಿಗೋ ಹೋಗ್ತಿದೆ. ಟೆಲ್ ಮಿ ಅಬೌಟ್ ಯುವರ್ ಸೆಲ್ಫ್, ನಿಮ್ಮ ಬಗ್ಗೆ ಹೇಳಿ ಅಂದ ಕೂಡಲೆ ಬಿಟ್ಟ ಬಾಣದಂತೆ ಈ ಅಷ್ಟೂ ಮಾತನ್ನು ಥುಪುಕ್ ಥುಪುಕ್ಕನೆ ಹೊರಗುಗುಳಬೇಕು. ಈ ಬಾರಿ ಗಂಟಲಲ್ಲಿ ನೂರು ಜನರಲ್ಲ ಸಾವಿರ ಜನ ಬೇಕಾದರೆ ಹಗ್ಗ ಯಾಕೆ ದೊಡ್ಡ ದೊಡ್ಡ ಕಬ್ಬಿಣದ ಸಲಾಕೆಗಳನ್ನೇ ಹಾಕಿ ಜಗ್ಗಲಿ ನಾನು ಮಣಿಯುವವನಲ್ಲ. ಈ ಕಂಪನಿಯಲ್ಲಿ ನನಗೆ ಕೆಲಸ ಬೇಕಷ್ಟೇ. ಅಪ್ಪನ ಸಾಲಗಳಿಗೆ ನೆರವಾಗಬೇಕು. ಮುಂದೆ ನಾನಂದುಕೊಂಡದ್ದನೆಲ್ಲಾ ಮಾಡಬೇಕೆಂದ್ರೆ ಈ ಕೆಲಸ ಪಡೆದುಕೊಳ್ಳಲೇ ಬೇಕು. ನನಗೆ ಈ ಕೆಲಸ ಬೇಕು, ನನಗೆ ಈ ಕೆಲಸ ಬೇಕು, ನನಗೆ ಈ ಕೆಲಸ ಬೇಕು. ಒಳಗೆ ಹೋಗಿ ನನ್ನ ಹೆಸರು ಬರುವವರೆಗೂ ಇದೇ ಮಾತನ್ನ ನೂರು ಸಲ ಹೇಳಿಕೊಳ್ಳುತ್ತಿದ್ದರೆ ಆತ್ಮವಿಶ್ವಾಸ ವೃದ್ಧಿಸುತ್ತದೆ.


The sum of ages of 5 children born at the intervals of 3 years each is 50 years. What is the age of the youngest child? ಆಯ್ಕೆಗಳೇನಿದ್ವು: ಎ. 4 Years ಬಿ. 8 Years ಸಿ. 10 Years ಡಿ. None of these. ಈ ಪ್ರಶ್ನೆಗೆ ಉತ್ತರ ಯಾವುದು ಹಾಕಿದ್ದೆ. ೪ ವರ್ಷ ಅಂತಾನಾ ಅಥವಾ ಯಾವುದೂ ಅಲ್ಲ ಅಂತ ಏನಾದ್ರೂ ಹಾಕಿಬಿಟ್ಟೆನಾ ಅಂತ ಗೊತ್ತಾಗ್ತಿಲ್ಲ. ಮೊದಲ ಸುತ್ತು ಆಪ್ಟಿಟ್ಯೂಡ್ ಸುತ್ತು ಇಂತಹ ತಲೆ ಕೆಡಿಸುವ ನೂರು ಪ್ರಶ್ನೆಗಳು ಅದನ್ನ ಉತ್ತರಿಸುವುದಕ್ಕೆ ಒಂದು ಪ್ರಶ್ನೆಗೆ ಒಂದು ನಿಮಿಷಕ್ಕಿಂತ ಕಡಿಮೆ ಅವಧಿ. ತೊಂಭತ್ತು ನಿಮಿಷಕ್ಕೆ ಸರಿಯಾಗಿ ಪೇಪರ್ ಕಿತ್ತುಕೊಂಡವರು ಎರಡು ಘಂಟೆಯಾಯ್ತು ಇನ್ನೂ ಫಲಿತಾಂಶ ಬಂದಿಲ್ಲ. ಅವಕಾಶವಿರುವುದು ಮೂರೋ ಅಥವಾ ನಾಲ್ಕೋ ಇರಬಹುದೇನೋ ಇಲ್ಲಿ ನೆರೆದಿರುವುದು ನೋಡಿದರೆ ಬರೋಬ್ಬರಿ ತೊಂಬತ್ತು ಜನ. ಈ ಕಾಯಿಸುವಿಕೆ ಕೂಡ ಸಂದರ್ಶನದ ಒಂದು ಭಾಗವಂತೆ, ತಾಳ್ಮೆಯಿಂದ ಕಾಯದಿರುವವನನ್ನು ಆಯ್ಕೆ ಮಾಡಲಾಗುವುದಿಲ್ಲವಂತೆ ಅಂತ ಅವನಾರೋ ಹೇಳುತ್ತಿದ್ದುದು ಕೇಳಿಸುತ್ತಿತ್ತು. ಅದೆಷ್ಟು ನಿಜವೋ, ಸುಳ್ಳೋ ಅಂತೂ ಒಬ್ಬರೂ ಕುಂತ ಜಾಗದಿಂದ ಕದಲುವ ರಿಸ್ಕ್ ತೆಗೆದುಕೊಳ್ಳುಲು ತಯಾರಿರಲಿಲ್ಲ. ಎರಡು ಘಂಟೆಯಾದರೂ ಕಾಯುತ್ತಲೇ ಇದ್ದರು. ಮೊದಲರ್ಧ ಘಂಟೆ ಗಪ್ ಚುಪ್ಪಾಗಿದ್ದವರು ನಿಧಾನವಾಗಿ ಅಲ್ಲಲ್ಲಿ ಗುಸಗುಸ ಪಿಸಪಿಸ ಶುರುವಾಯ್ತು. ನನ್ನ ಪಕ್ಕದಲ್ಲಿದ್ದವನು ಮಾತಿಗೆ ಮೊದಲಾದ. ಅವನು ಬೇರೆ ಕಂಪನಿಯಲ್ಲಿ ಕೆಲಸ ಮಾಡುತ್ತಿರುವನಂತೆ ರಜೆ ಹಾಕಿ ಇವತ್ತು ಸಂದರ್ಶನಕ್ಕೆ ಬಂದಿರುವನಂತೆ. ಆ ಕಂಪನಿಯಲ್ಲಿ ತೊಂದರೆ ಏನಾಗಿತ್ತೆಂದರೆ ಅಯ್ಯೋ ಅಲ್ಲಿ ಕೆಲಸ ಬೋರು, ಅದಕ್ಕೇ ಇಲ್ಲಿಗೆ ಜಂಪ್ ಮಾಡ್ತಿದ್ದೇನೆಂದ. ಈತನ ಬಳಿ ಈಗಾಗಲೇ ಕೆಲಸವಿದೆ ಇವನಿಗೇನಪ್ಪಾ ಕಷ್ಟ ಇಲ್ಲಿ ಸಿಗದಿದ್ದರೂ ತೊಂದರೆಯಿಲ್ಲ ಎಂದುಕೊಂಡೆ. ಮೊದಲ ಸುತ್ತಿನಲ್ಲಿ ಆಯ್ಕೆಯಾದರೆ ಸಾಕೆಂದು ಮನಸ್ಸಿನಲ್ಲೇ ಅಂದುಕೊಂಡೆ. ಮೌನವಾಗಿದ್ದಷ್ಟೂ ಭಯ ಕಾಡುವುದು, ಮತ್ತು ಮನದಲ್ಲಿರುವ ಸಾವಿರ ಭಯೋತ್ಪಾದಕರು ತಲೆಯೆತ್ತುವರೆಂದು ಭಯವಾಗಿ ಅವನೊಂದಿಗೆ ಮಾತು ಮುಂದುವರೆಸಲು ಆ ಪ್ರಶ್ನೆಗೆ ಏನು ಉತ್ತರಿಸಿದನೆಂದು ಕೇಳಿದೆ.

ಆ ಮಕ್ಕಳ ವಯಸ್ಸುಗಳನ್ನ ‘x’ ಎಂದು ಬರೆದುಕೋ, (x + 3), (x + 6), (x + 9) ಮತ್ತು (x + 12) ವರ್ಷಗಳು ಅಂತಿಟ್ಟುಕೋ.
ಹಾಗಾಗಿ, x + (x + 3) + (x + 6) + (x + 9) + (x + 12) = 50
http://www.indiabix.com/_files/images/aptitude/1-sym-imp.gif 5x = 20
http://www.indiabix.com/_files/images/aptitude/1-sym-imp.gif x = 4.
* ಕೊನೆಯ ಮಗುವಿನ ವಯಸ್ಸು = x = 4 ವರ್ಷಗಳು.
ಅಯ್ಯಯ್ಯಪ್ಪ ಇವನೇನು ಮನುಷ್ಯನೋ ಏನೋ ಗೊತ್ತಾಗಲಿಲ್ಲ. ಶಾಲೆಯಲ್ಲಿ ಭಲೇ ಬುದ್ಧಿವಂತನಿರಬೇಕೆಂದುಕೊಂಡೆ. ನಾನೇನೋ ಅಡ್ಡೇಟಿನ ಮೇಲೆ ಗುಡ್ಡೇಟು ಲೆಕ್ಕ ಹಾಕಿ ಉತ್ತರ ಬರೆದರೆ ಇವನು ಈ ರೀತಿ ಲೆಕ್ಕಾಚಾರ ಹಾಕಿದ್ದಾನಲ್ಲ ಪುಣ್ಯಾತ್ಮ ಎಂದುಕೊಂಡೆ. ಇವನಿಗೆ ಕೆಲಸ ಗ್ಯಾರಂಟಿ, ನನ್ನಂತವನಿಗೆ ಕೆಲಸ ಸಿಗಲಾರದು ಎಂದು ಅಳುಕು ಶುರುವಾಯ್ತು. ತಲೆಕೆಡಿಸಿಕೊಂಡಿರುವ ಸಮಯದಲ್ಲೇ ಡುಮ್ಮಗಿನ ಫಲಿತಾಂಶ ಹೊತ್ತ ಮೇಡ್ರಮ್ಮು ಬಂದರು. ನನ್ನ ಪಕ್ಕದ ಬುದ್ಧಿವಂತನನ್ನೂ ಸೇರಿಸಿ ಇಪ್ಪತ್ತು ಜನರ ಹೆಸರನ್ನು ಕೂಗಿದರು. ಅವರೆಲ್ಲಾ ಎದ್ದು ನಿಂತರು. ನನ್ನ ಹೆಸರು ಬರಲೇ ಇಲ್ಲ. ಮತ್ತೆ ಮುಗೀತು ಕತೆ ಎಂದುಕೊಂಡೆ, ಹಣೆ ಚಚ್ಚಿಕೊಳ್ಳುವಂತಾಯ್ತು. ಆದರೆ ಆ ಇಪ್ಪತ್ತು ಜನರನ್ನ ಕಳುಹಿಸಲಾಯ್ತು. ಅರೆರೆ! ಇದು ಹೇಗೆ ಸಾಧ್ಯವೆಂದೇ ಅರ್ಥವಾಗಲಿಲ್ಲ. ಎದೆ ತನ್ನಿಂತಾನೇ ಉಬ್ಬಿ ಹೋಯ್ತು. ಅದೆಲ್ಲಿತ್ತೋ ಒಂದು ರೀತಿಯ ಹುರುಪು, ಕಣ್ಗಳಲ್ಲಿ ಹೊಳಪು ಮೂಡಿದವು. ಯಸ್ ಯಸ್ ಯಸ್ ಎಂದು ಒಮ್ಮೆ ಒಳಗೊಳಗೇ ಕೂಗಿಕೊಂಡೆ. ಗೆಲ್ಲುವೆನೆಂಬ ಹುರುಪು ಮತ್ತೆ ಬಂತು. ಎಚ್ಚೆತ್ತು ಕೂತೆ. ಆತ ಹೋಗುತ್ತಾ ಆಲ್ ದಿ ಬೆಸ್ಟ್ ಹೇಳಿ ಹೋದ. ಆದರೆ ಬುದ್ಧಿವಂತರನ್ನ ಕಳುಹಿಸಿ ಉಳಿದ ದಡ್ಡರಿಗೆ ಕೆಲಸ ಕೊಟ್ಟಿರಬಹುದೇ ಎಂಬ ಚಿಂತೆ ಕಾಡಲು ಶುರುವಾಯ್ತು. ನೋಡಿಕೊಂಡರಾಯ್ತು ಯಾವುದೋ ಒಂದು ಕೆಲಸ ಸಧ್ಯಕ್ಕೆ ಸಿಕ್ಕಿದೆಯಲ್ಲ ಮುಂದೆ ನೋಡಿಕೊಂಡರಾಯ್ತೆಂದು ಕೂತೆ. ಎರಡನೆಯ ಸುತ್ತು. ಒಂದು ವಿಷಯದ ಮೆಲೆ ಎರಡು ನಿಮಿಷದವರೆಗೂ ಮಾತನಾಡಬೇಕಿತ್ತು ಮತ್ತು ನನ್ನ ಬಗ್ಗೆ ವಿವರಿಸಬೇಕಿತ್ತು. ಆತ್ಮವಿಶ್ವಾಸ ದ್ವಿಗುಣಗೊಂಡಿದ್ದರಿಂದ ಬಾಯಿಗೆ ಬಂದದ್ದನ್ನ ಒದರಿದೆ. ಎರಡನೆಯ ಸುತ್ತೂ ಕೂಡ ಆಯ್ಕೆಯಾಗೇ ಹೋಯ್ತು.

ಎರಡನೆಯ ಸುತ್ತಿನಲ್ಲಿ ಮೂವತ್ತೈದು ಜನರನ್ನ ಕಳುಹಿಸಲಾಯ್ತು. ಕೆಲವರು ಹೋಗುತ್ತಿದ್ದಾಗ ಕಣ್ಣಿನಲ್ಲಿ ನೀರು ಹಾಕಿಕೊಂಡು ಹೊರಟರು. ಛೆ ಪಾಪ ಎಂದೆಣಿಸಿತು. ಯಾರು ಯಾರಿಗೆ ಏನೇನು ಅಗತ್ಯವೋ. ಇಲ್ಲಿ ಸ್ಪರ್ಧಿಸಲಾಗದೆ ನನಗಿಂತ ಪ್ರತಿಭಾವಂತರು ಸೋತು ಹೋಗುತ್ತಿರುವರೇನೋ ಗೆದ್ದಿದ್ದವರ ಕಣ್ಣುಗಳಲ್ಲಿ ಸಧ್ಯ ತಾವು ಬಚಾವಾದೆವೆಂಬ ಒಂದು ರೀತಿಯ ನಿರಾಳತೆ ಮತ್ತು ಖುಷಿಯಿತ್ತು. ಸೋತವರಿಗೆ ಬೇರೆಲ್ಲಾದರೂ ಕೆಲಸ ಸಿಗಲಿ ಎಂದು ಮನದಲ್ಲೇ ಹರಸಿ ಮೂರನೆಯ ಸುತ್ತಿಗೆ ಸಿದ್ಧನಾದೆ. ಒಬ್ಬೊಬ್ಬರಾಗಿ ಹೆಸರು ಕರೆಯುವರಂತೆ. ಹೋಗಿ ಮ್ಯಾನೇಜರನೊಂದಿಗೆ ಪ್ರಶ್ನೋತ್ತರ ಸುತ್ತು ಎದುರಿಸಬೇಕಂತೆ. ಮತ್ತೆ ಕಾಯುವ ಪರೀಕ್ಷೆ. ಒಬ್ಬೊಬ್ಬರು ಹೋದರೆ ಅರ್ಧರ್ಧ ಘಂಟೆ. ಅಂತೂ ನನ್ನ ಸರದಿ ಬಂತು. ಶರಣ್ ಎಂದದ್ದೇ ದಡಬಡನೆ ಎದ್ದು ಒಳಗೆ ಹೋದೆ.

ಕಂಗ್ರಾಚುಲೇಷನ್ಸ್ ಆಯ್ಕೆಯಾಗಿರುವುದಕ್ಕೆ ಬನ್ನಿ ಕುಳಿತುಕೊಳ್ಳಿ ಅಂತ ಎದುರಿನ ಕುರ್ಚಿಯ ಮೇಲೆ ಕೂರಿಸಿದರು. ನಾನು ಆಯ್ಕೆಯೇ ಆಗಿ ಹೋಗಿದ್ದೇನೆಂದು ಹೆಮ್ಮೆ, ಖುಷಿಯಾಯ್ತು. ನೋಡಿ ನಮ್ಮ ಕಂಪನಿಯಲ್ಲಿ ಶಿಫ್ಟ್ ಗಳು ಇರುತ್ತವೆ, ನೀವು ಅದಕ್ಕೆ ಹೊಂದಿಕೊಳ್ಳಲು ಒಪ್ಪಿಗೆಯಿದೆಯಾ? ಆಯ್ತು ಸರಿ ನನಗೆ ಒಪ್ಪಿಗೆ ಇದೆ ಎಂದೆ. ಒಂಭತ್ತು ಘಂಟೆಗಳು ಮಾತ್ರ ಕೆಲಸ ಇರುತ್ತೆ ಅಂತ ಹೇಳೋಕಾಗಲ್ಲ, ಕೆಲವು ಸಲ ಹನ್ನೆರಡು ಗಂಟೆಗಳ ಕಾಲ ಬೇಕಾದರೂ ಕೆಲಸ ಇರಬಹುದು. ಯಾವ ಸಮಯದಲ್ಲಿ ಕೆಲಸಕ್ಕೆ ಕರೆದರೂ ಬರಬೇಕಾಗುತ್ತೆ. ಕೆಲವು ಸಲ ಶನಿವಾರ ಭಾನುವಾರವೂ ಸಹ ಕೆಲಸ ಮಾಡಬೇಕಾಗುತ್ತೆ. ನೀವು ತಯಾರಿದ್ದೀರಾ ಎಂದರು. ಏನು ಹೇಳಬಹುದೆಂದು ಯೋಚಿಸುತ್ತಲಿದ್ದೆ. ಹಿಂದೆ ನಿಂತು ಮೊದಲ ಸುತ್ತಿನಲ್ಲಿ ಆಯ್ಕೆಯಾಗಲಾರದೇ ಹೋದ ಇಪ್ಪತ್ತೂ ಜನರು ನಾನು ಏನು ಪ್ರತಿಕ್ರಿಯೆ ನೀಡಬಹುದೆಂದು ಕಣ್ಣುಗಳನ್ನು ಇಷ್ಟಿಷ್ಟಗಲ ತೆರೆದು ಕಾಯುತ್ತಾ ನನ್ನನ್ನೇ ನೋಡುತ್ತಿರುವ ಹಾಗೆ ಭಾಸವಾಯ್ತು. ಥಟ್ಟನೆ ಹಿಂದೆ ತಿರುಗಿ ನೋಡಿದೆ ಯಾರೂ ಇರಲಿಲ್ಲ. ಎಚ್ ಆರ್ ಮಾತು ಮುಂದುವರೆಸಿದರು. ನಿಮಗೆ ಎಂಟು ಸಾವಿರ ತಿಂಗಳಿಗೆ ಸಂಬಳ ನಿಗದಿ ಮಾಡಲಾಗಿದೆ. ಮತ್ತು ಆರು ತಿಂಗಳ ಕಂಟ್ರಾಕ್ಟ್ ಮೇಲೆ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗುವುದು. ಆರು ತಿಂಗಳಿಗೆ ನಿಮ್ಮನ್ನು ತೆಗೆದುಕೊಳ್ಳುತ್ತಿರುವ ಪ್ರಾಜೆಕ್ಟ್ ಮುಗಿದುಹೋಗಲಿದೆ. ನಂತರ ನಮಗೆ ಇನ್ನಾವುದಾದರೂ ಪ್ರಾಜೆಕ್ಟ್ ಸಿಕ್ಕರೆ ಅಥವಾ ಮತ್ತಾವುದಾದರೂ ಪ್ರಾಜೆಕ್ಟಿನಲ್ಲಿ ಅವಕಾಶವಿದ್ದರೆ ನಿಮ್ಮನ್ನು ತೆಗೆದುಕೊಳ್ಳಲಾಗುವುದು. ನಿಮಗೆ ಈ ಎಲ್ಲಾ ಕಂಡೀಷನ್ನಿಗೆ ಒಪ್ಪಿಗೆ ಇದ್ದರೆ ನಾಳೆ ಬಂದು ಆಫರ್ ಲೆಟರ್ ಸ್ವೀಕರಿಸಿಕೊಂಡು ಹೋಗಬಹುದು ಎಂದರು. ಇಷ್ಟು ದೊಡ್ಡ ಕಂಪನಿಯಲ್ಲಿ ಕೆಲಸ ಗೆದ್ದೇಬಿಟ್ಟೆನೆಂದು ಹೆಮ್ಮೆಹಿಂದ ಬೀಗುತ್ತಿದ್ದವನ ತಲೆಯ ಮೇಲೆ ಮೊಟಕಿ ಕಾಲುಗಳನ್ನು ನೆಲದಿಂದ ಮೂರು ಅಡಿಯಷ್ಟಾದರೂ ಒಳಕ್ಕೆ ಹುಗಿದಹಾಗಾಯ್ತು. ಏನೆಂದು ಉತ್ತರ ಕೊಡುವುದು. ಇವರು ಹೇಳುತ್ತಿರುವುದಕ್ಕೆಲ್ಲಾ ಒಪ್ಪಿಗೆಯೆಂದು ಹೇಳಿಬಿಡಲೇ. ಸುಲಭವಾಗಿ ಕೆಲಸವೂ ಸಿಕ್ಕೇಹೋಗುತ್ತದೆ. ಆದರೆ ಇವರು ಷರತ್ತುಗಳನ್ನು ಹಾಕುತ್ತಿರುವುದನ್ನು ನೋಡಿದರೆ ಕೆಲಸಕ್ಕೆ ತೆಗೆದುಕೊಂಡಹಾಗಿಲ್ಲ ಜೀತಕ್ಕೆ ಕರೆಯುತ್ತಿರುವಹಾಗಿದೆ. ನನಗೆ ಯೋಚಿಸಲು ಸಮಯಾವಕಾಶ ಕೊಡಿ ಎಂದೆ. ಒಂದು ಘಂಟೆ ಯೋಚಿಸಿ ನಿನ್ನ ನಿರ್ಧಾರ ತಿಳಿಸು ಎಂದು ಕಳುಹಿದರು.



ನನ್ನ ನಂತರ ಮತ್ತೊಬ್ಬ ಒಳಗೆ ಹೋದ. ಮಗದೊಬ್ಬ ಒಳಗೆ ಹೋದ ಎಲ್ಲರೂ ನಗುನಗುತ್ತಲೇ ಹೊರಬಂದರು. ಒಬ್ಬಳನ್ನು ತಡೆದು ನೀವು ಕಂಟ್ರಾಕ್ಟಿಗೆ ಸಹಿ ಹಾಕಿದಿರೇನೆಂದು ಕೇಳಿದರೆ ಹೌದು ಎಂದಳು. ಸೋತವರೆಲ್ಲರೂ ನನ್ನ ಸುತ್ತ ನಿಂತು ನನ್ನ ಕೆಲಸ ಕಿತ್ತುಕೊಂಡಿದ್ದೀಯ ಸುಮ್ಮನೆ ಒಪ್ಪಿಕೋ ಎನ್ನುತ್ತಲಿದ್ದರು. ಅಪ್ಪ ಅಮ್ಮ ಎಲ್ಲಾದರೆ ಏನೋ, ಹೇಗೂ ಎಲ್ಲಾದರೂ ಕೆಲಸ ಮಾಡಬೇಕಿರುವುದೇ ತಾನೇ ಕಂಪನಿಗಳವರು ಈ ರೀತಿಯ ಷರತ್ತುಗಳನ್ನೂ ಹಾಕಬಾರದೆಂದರೆ ಹೇಗೆ ಎಂದು ಉಪದೇಶ ನೀಡುತ್ತಿದ್ದರು. ಲೋ ಹೊರಗಡೆ ಹೋಗಿ ನೋಡು ಕೆಲಸ ಒಂದು ಕೊಡ್ತೀವಿ ಅಂದರೆ ಏನು ಮಾಡಲೂ ಸಹ ಸಿದ್ಧರಿರುವವರು ಎಷ್ಟು ಜನ ಕ್ಯೂ ನಿಂತಿದ್ದಾರೆ ನೀನು ಒಪ್ಪಿಕೊಳ್ಳದಿದ್ದರೆ ಐ.ಟಿ ಕಂಪನಿಗಳಿಗೆ ಯಾವ ರೀತಿಯ ನಷ್ಟವೂ ಇಲ್ಲ, ನಷ್ಟವೇನಿದ್ದರೂ ನಿನಗೇನೇ, ಸುಮ್ಮನೆ ಒಪ್ಪಿಕೋ ಎಂದು ನನ್ನ ನೆರಳೇ ಹೇಳುತ್ತಿತ್ತು. ಆದರೂ ಆತ ನನ್ನ ಬದುಕನ್ನೇ ಗುತ್ತಿಗೆ ಕೇಳುತ್ತಿರುವವನ ಹಾಗೆ ಕಂಡ. ಅವನಿಗೆ ಬೇಕಾದ ಹಾಗೆ ನಾನು ಯಾಕೆ ಬದುಕಬೇಕೆಂದೆನಿಸಿತು. ಮೂರ್ಖತನವೆಂದು ಗೊತ್ತಿದ್ದರೂ ಐಟಿ ಕಂಪನಿಗಳಿಗೆ ಒಟ್ಟಾರೆಯಾಗಿ ಒಂದು ನಮಸ್ಕಾರ ಹೊಡೆದುಬಿಟ್ಟೆ. ಮುಂದೇನು ಮಾಡುತ್ತೀನೋ ಗೊತ್ತಿಲ್ಲ, ಸಾಲ ಹೇಗೆ ಹೊರುತ್ತೀನೋ ಗೊತ್ತಿಲ್ಲ. ಜೀವನ ಹೇಗೆ ನಡೆಯುವುದೋ ಗೊತ್ತಿಲ್ಲ. ಆದರೆ ಸೋತವರೆಲ್ಲರೂ ಬಂದು ಕೈಕುಲುಕಿ ಧನ್ಯವಾದಗಳು ನಮಗೊಂದು ಅವಕಾಶ ಸಿಕ್ಕಿತು ನಿಮ್ಮಿಂದ ಎಂದು ಮತ್ತೆ ಒಳಹೋಗುತ್ತಿರುವಂತೆನಿಸಿತು. ಹಿಂದಿರುಗದೆ, ನನ್ನ ನಿರ್ಧಾರವನ್ನೂ ಹೇಳದೇ ಕಂಪನಿಗಳಿಗೆ ಬೆನ್ನು ಹಾಕಿದೆ. 







+ನೀ.ಮ. ಹೇಮಂತ್

Tuesday 10 July 2012

ಸರ್ವಾಂತರ್ಯಾಮಿ!




(ಕಥೆಯಲ್ಲ- ಅಪೂರ್ಣ ಸನ್ನಿವೇಶಗಳ ಸರಮಾಲೆ)

ಆರಂಭ

     ಣ್ಣಾ ಅಣ್ಣಾ ಒಂದು ಫೇಸ್ಬುಕ್ ಅಕೌಂಟ್ ಓಪನ್ ಮಾಡ್ಕೊಡಣ್ಣಾ. ಅಣ್ಣ ಅಣ್ಣ ಪ್ಲೀಸ್ ಅಣ್ಣಾ! ಅರೆ ಇವನಾ ಇಷ್ಟಿದ್ದೀಯಾ ನಿನಗ್ಯಾಕೋ ಫೇಸ್ ಬುಕ್ ಅಕೌಂಟು ಎಂದರೆ ಇಷ್ಟಿದ್ರೆ ಫೇಸ್ ಬುಕ್ ಅಕೌಂಟ್ ಇರಬಾರದಾ ಅಣ್ಣಾ ಎಂದ ಪ್ರಶ್ನೆಗೆ ಉತ್ತರಿಸಲಾಗದೇ ಮುಚ್ಕೊಂಡೆ. ಅಣ್ಣಾ ಓಪನ್ ಮಾಡ್ಕೊಡಣ್ಣಾ ಎಂದು ಮತ್ತೇ ಶುರುಮಾಡಿದ. ಆದರೆ ಇವನಿಗ್ಯಾಕೆ ಬೇಕು, ಇನ್ನೂ ಆರನೇ ತರಗತಿಯಲ್ಲಿ ಕಲೀತಿರೋ ಹುಡುಗ ಈಗಲೇ ಫೇಸ್ ಬುಕ್ಕು ಅಕೌಂಟ್ ಓಪನ್ ಮಾಡಿಸೋದು ಸರಿಯೋ ತಪ್ಪೋ? ನಮ್ಮ ಗುರುಗಳೊಬ್ಬರ ಮನೆಯಲ್ಲಿ ಅವರದ್ದೊಂದು ಅಕೌಂಟು, ಅವರ ಶ್ರೀಮತಿಯವರದ್ದೊಂದು, ಆರು ವರ್ಷದ ಮಗಳದ್ದೊಂದು, ಎಂಟು ವರ್ಷದ ಮಗಳದ್ದೊಂದು ಅಕೌಂಟ್ ತೆರೆದಿದ್ದಾರೆ, ಅವೂ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ತಾವು ಬಿಡಿಸಿದ ಬಣ್ಣ ಬಣ್ಣದ ಚಿತ್ರಗಳನ್ನ, ಅಮ್ಮನ ರಂಗೋಲೆಯನ್ನ, ಈ ರೀತಿಯ ಫೋಟೋಗಳು, ಗುಡ್ ಮಾರ್ನಿಂಗ್, ಗುಡ್ ಈವನಿಂಗ್, ಹಾಯ್ ಫ್ರೆಂಡ್ಸ್ ಎಂಬ ಅಪ್ಡೇಟ್ಸ್ ಗಳನ್ನ ಹಾಕುತ್ತಿರುತ್ತಾರೆ. ತಪ್ಪೇನಿಲ್ಲ ಎಂದು ಒಮ್ಮೆ ಅನ್ನಿಸಿದರೆ. ಮತ್ತೊಮ್ಮೆ ಈಗಲೇ ಕಂಪ್ಯೂಟರ್ ಫ್ರೀ ಇದ್ದರೆ ಸಾಕು ಹೇಗೋ ಪೂಸಿ ಹೊಡೆದು ಪವರ್ ಪಾಯಿಂಟು, ಪೈಂಟು ತೆರೆದುಕೊಂಡು ಏನೋ ಚಿತ್ರವಿಚಿತ್ರ ಕೆಲಸಗಳನ್ನ ಮಾಡ್ಕೊಂಡು ಕೂತಿರ್ತಾನೆ ಇನ್ನ ಫೇಸ್ ಬುಕ್ಕು ಬೇರೆ ತೋರಿಸಿದರೆ ದಿನಂಪ್ರತಿ ಬಂದು ತಲೆ ತಿನ್ನಲು ಶುರುಮಾಡ್ತಾನೆ ಎಂಬ ಭಯದಿಂದ ನೋಡೋ ಅವೆಲ್ಲಾ ನಿನ್ನ ವಯಸ್ಸಲ್ಲಿ ಮಾಡಬಾರದು ಎಂದೆ ಕೆಟ್ಟದ್ದೇನಾದ್ರೂ ಇರುತ್ತಾ ಅಣ್ಣಾ, ಮತ್ತೆ ನೀನು ಯಾವಾಗಲೂ ಓಪನ್ ಮಾಡ್ಕೊಂಡಿರ್ತೀಯಾ ಎಂದು ಇಟ್ಟ ಬತ್ತಿ. ಹೇಗೆ ಸಮಜಾಯಿಷಿ ಹೇಳುವುದು ಇವನಿಗೆ ಎಂದು ಗೊತ್ತಾಗದೇ ಒಳಗೇ ಉತ್ತರಕ್ಕಾಗಿ ತಡಕಾಡುತ್ತಿದ್ದಷ್ಟೂ ಶರ್ಟು ಜಗ್ಗುತ್ತಾ ಅಣ್ಣಾ ಪ್ಲೀಸ್ ಅಣ್ಣಾ, ಪ್ಲೀಸ್ ಅಣ್ಣಾ ಎಂದು ತಲೆ ತಿಂದು ಇವತ್ತು ಸ್ವಲ್ಪ ಕೆಲ್ಸ ಇದೆ ಕಣೋ, ಅದು ಅರ್ಧ ಘಂಟೆ ಆಗುತ್ತೆ ಅಷ್ಟೊತ್ತು ಸಮಯ ಇವಾಗ ಇಲ್ಲ, ನಾಳೆ ಮಾಡ್ಕೊಡ್ತೀನಿ ಎಂದೆ ಹು ಸರಿ ಎಂದು ಜಿಗಿಯುತ್ತಾ ಹೋದ. ಫೇಸ್ ಬುಕ್ಕೇನು ವಯಸ್ಕರಿಗೆ ಮಾತ್ರವಲ್ಲವಲ್ಲ ಅಪರೂಪಕ್ಕೆ ಎ ಸರ್ಟಿಫಿಕೇಟ್ ಎನ್ನಬಹುದಾದ ಫೋಟೋಗಳು ಓಡಾಡುವುದನ್ನ ನೋಡಿದ್ದೆ, ಅದು ಪೇಪರ್ ಗಳಲ್ಲಿ, ಟಿವಿ ಪ್ರೋಗ್ರಾಮ್ ಗಳಲ್ಲಿ, ರಸ್ತೆಗಳ ಭಿತ್ತಿಗಳಲ್ಲಿ ಇರುವಷ್ಟೇನು ಹೆಚ್ಚಿರಲಿಲ್ಲವಲ್ಲ. ಇವನ್ಯಾವನೋ ಸುಮ್ಮನೆ ಏನೋ ಮಾಡಿಕೊಂಡಿರುವವನಿಗೆ ಬಂದು ಹುಳ ಬಿಟ್ಟು ಹೋದ ಎಂದುಕೊಳ್ಳುತ್ತಾ, ಸಧ್ಯ ಹೋದನಲ್ಲ ನಾಳೆಗೆ ಮರೆತಿರುತ್ತಾನೆ ಎಂದು ಸುಮ್ಮನಾದೆ. ಮತ್ತೆ ಮಾರನೆಯ ದಿನವೂ ಬಂದು ಅದೇ ವರಾತ. ಹೇಗೆ ಹೇಳಿದರೂ ಅವನ ಪ್ರಶ್ನೆಗೆ ಉತ್ತರಿಸುವ ಶಕ್ತಿ ನನ್ನಲ್ಲಿಲ್ಲ. ಲೇ ಫೇಸ್ ಬುಕ್ಕು ಸ್ಕೂಲಲ್ಲಿರೋವಾಗ ನಮಗೆ ಗೊತ್ತೇ ಇರಲಿಲ್ಲ ಗೊತ್ತಾ ಈಗ ಕೆಲಸಕ್ಕೆ ಸೇರಿದ ಮೇಲೆ ನಾವ್ ಓಪನ್ ಮಾಡಿರೋದು ನೀನ್ ಸುಮ್ಮನೆ ಹೋಗಪ್ಪಾ ನನ್ನ ತಲೆ ತಿನ್ನಬೇಡ, ಕಾಲೇಜು ಸೇರಿದಮೇಲೆ ಮಾಡುವಿಯಂತೆ, ನಿನಗೇನು ನಿನ್ನ ಫ್ರೆಂಡ್ಸೆಲ್ಲಾ ಸ್ಕೂಲಲ್ಲೇ ಸಿಗಲ್ವಾ ಹೋಗು ಸುಮ್ಮನೆ ಎಂದು ಸ್ವಲ್ಪ ಜೋರಾಗೇ ಹೇಳಿದೆ ಮಾತೇ ಆಡಲಿಲ್ಲ ಆಸಾಮಿ ಹೋದ. ಅರ್ಧ ಘಂಟೆಯ ಒಳಗೆ ಮತ್ತೆ ಬಂದ ಅವರಮ್ಮನೊಡನೆ, ಅದೇನೋ ಫೇಸ್ ಬುಕ್ ಅಂತೆ ತೆಕ್ಕೊಡಪ್ಪ ಅವನಿಗೆ, ಒಂದೇ ಕಣ್ಣಲ್ಲಿ ಅಳ್ತಾನೆ ಎಂದು ಬಂದರು. ಯಾತಕ್ಕೆ ಚಿಕ್ಕ ಹುಡುಗರ ಕೈಯಲ್ಲೇ ಈಗಲೇ ಕೊಡಬಾರದೆಂದು ಹೇಳೋದಕ್ಕೆ ಕಾರಣಗಳು ನನ್ನಂತಹ ಮಂದ ಬುದ್ಧಿಯವನಿಗೆ ಆ ಕ್ಷಣಕ್ಕೆ ಹೊಳೆಯಲಿಲ್ಲ, ಹಾಗೂ ದಿನಾ ಬಂದು ಖ್ವಾಟಲೆ ಕೊಡ್ತಾನೆ ಫೇಸ್ ಬುಕ್ ಓಪನ್ ಮಾಡಣ್ಣ ಅಂತ ನನಗೆ ಕಿರಿಕಿರಿಯಾಗುತ್ತೆ ಅಂತ ನೇರವಾಗಿ ಹೇಳುವುದಕ್ಕೆ ಆಗಲಿಲ್ಲ. ಏನಕ್ಕೋ ನಿನಗೆ ಫೇಸ್ ಬುಕ್ಕು ಎಂದರೆ ಕಣ್ಣುಜ್ಜಿಕೊಳ್ಳುತ್ತಲೇ ಫ್ರೆಂಡ್ಸ್ ಎಲ್ಲಾ ರೇಗಿಸ್ತಾರೆ ಇನ್ನೂ ಚಿಕ್ಕ ಹುಡುಗ, ದಡ್ಡ, ಒಂದು ಫೇಸ್ ಬುಕ್ ಅಕೌಂಟ್ ಇಲ್ಲಾ ಇವನತ್ರ ಅಂತ ಎಂದ. ಹೀಗೂssssss ಉಂಟೇ ಎಂದು ಪಕ್ಕದಲ್ಲಿ ಯಾರೋ ಹೇಳಿದಹಾಗಾಯ್ತು. ಪ್ರಪಂಚ ಹಾಳಾಗ್ತಿದ್ಯಾ, ಉದ್ಧಾರ ಆಗ್ತಿದ್ಯಾ ಎಂದು ಗೊತ್ತಾಗಲಿಲ್ಲ. ಫೇಸ್ ಬುಕ್ಕಿಗೆ ವ್ಯಸನಿಗಳಾದವರು ಕಂಪ್ಯೂಟರ್ ಮುಂದೇನೇ ಹೆಚ್ಚು ಹೊತ್ತು ಇರ್ತಾರೆ, ಓದಿನ ಮೇಲೆ ಗಮನ ಕಡಿಮೆಯಾಗುತ್ತೆ, ಆಟ ಕಡಿಮೆ ಮಾಡ್ತಾರೆ ಅದು ಇದು ಲೊಟ್ಟು ಲೊಸ್ಕು ಎಂದು ಭಾಷಣ ಬಿಗಿದರೆ ಆಗಲ್ಲ ಅಂತ ಹೇಳಪ್ಪಾ ನೇರವಾಗಿ ಬುರುಡೆ ಬಿಡಬೇಡ ಎಂದು ಹೇಳಿ ಹೋದಾರು ಎಂದೆನಿಸಿ ಸರಿ ಆಂಟಿ ಎಂದು ರೂಮಿಗೆ ಬಂದೆ ಬಾಲದಂತೆ ಹಿಂದೆಯೇ ಬಂದ. ನನ್ನ ಕಂಪ್ಯೂಟರಿನ ಸ್ಕ್ರೀನಿಗೇ ಕಣ್ಣು ನೆಟ್ಟು ಕಾಲು ಟಿಂಗ್ ಟಿಂಗನೆ ಕುಣಿಸುತ್ತಾ ನಿಂತಿದ್ದ. ಏನ್ ಹೆಸರು ಕೊಡ್ಲೋ ಎಂದರೆ ನಿಖಿಲ್ ದಿ ಗ್ರೇಟ್ ಎಂದೇ ಬೇಕೆಂದ. ಪಾಸ್ವರ್ಡ್ ಕೊಡೋ ಎಂದರೆ ನನ್ನನ್ನು ಆಕಡೆ ತಿರುಗಿಸಿ ಕುಟ್ಟಿದ. ಅಬ್ಬಬ್ಬಾ! ಇವರಿಂದ ಕಲಿಯುವುದು ಬೇಜ್ಜಾನಿದೆ ಎಂದುಕೊಂಡು ಅಂತೂ ಫೇಸ್ ಬುಕ್ಕೆಂಬ ರೈಲಿನ ಹಳಿಗೆ ಇನ್ನೊಂದು ತಲೆಯನ್ನು ಕೊಟ್ಟೆ!

ಮದುವೆ

ಸ್ನೇಹಿತೆಯೊಬ್ಬಳಿಗೆ ಗಂಡು ಹುಡುಕುತ್ತಿದ್ದರು. ಹಲವಾರು ಗಂಡುಗಳು ಹಲವಾರು ಕಾರಣಳಿಂದ ತಿರಸ್ಕೃತರಾದ ನಂತರ ಈಗ ಒಂದು ಹುಡುಗನ ಫೋಟೋ ಇಷ್ಟವಾಗಿತ್ತು, ಆ ಹುಡುಗನ ಕಡೆಯವರೂ ಸಹ ಆಸಕ್ತಿ ತೋರಿದ್ದರು. ಹಾಗಾಗಿ ಸಂಬಂಧ ಬಂದದ್ದೇ ಜಾತಕ ಕೇಳಿದರು, ಯಾವ ಜಾತಕ? ಫೇಸ್ ಬುಕ್ ಜಾತಕ. ಅವನ ಫೇಸ್ ಬುಕ್ ಹೆಸರು ತಿಳಿದುಕೊಂಡು ತಂದು ವಿವರವಾಗಿ ಪ್ರೊಫೈಲ್ ತಪಾಸಣೆ ಶುರುವಾಯ್ತು. ರಿಲೇಷನ್ಶಿಪ್ ಸ್ಟೇಟಸ್ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ ಇಲ್ಲಿಯವರೆಗೂ, ಹಾಕಿರುವ ಅಪ್ಡೇಟ್ಸ್ ಗಳಲ್ಲಿ ಹೆಚ್ಚಿನವು ಕ್ರಿಕೆಟ್ ಟಿ೨೦ ಪಂದ್ಯಗಳ ಬಗ್ಗೆ ಬಿಟ್ಟರೆ, ಪ್ರೀತಿಗೆ ಸಂಬಂಧ ಪಟ್ಟ ಉಲ್ಲೇಖಗಳು, ಅದನ್ನೂ ಇನ್ನೂ ಗಮನಿಸಿದರೆ ಎಲ್ಲಾ ಪ್ರೀತಿಯಲ್ಲಿ ಸೋತ ಉಲ್ಲೇಖಗಳಿವೆ, ಅದನ್ನು ಬಿಟ್ಟರೆ ಫೋಟೋಗಳು ಅಂಥ ಕೆಟ್ಟ ಫೋಟೋಗಳೇನಿಲ್ಲಾ, ಟ್ಯಾಗ್ ಮಾಡಿರುವುದರಿಂದ ಹಿಡಿದು ಎಲ್ಲಾ ಸಭ್ಯವಾಗಿವೆ, ಯಾವ  ಫೋಟೋಗಳಲ್ಲೂ ಯಾವುದೇ ಹುಡುಗಿಯರ ಜೊತೆ ತುಂಬಾ ಹತ್ತಿರವಿರುವಂತೆ ಹಿಡಿಸಿಕೊಂಡಂತಹುದಾವುದೂ ಇಲ್ಲ, ಅದನ್ನು ಬಿಟ್ಟರೆ ಸ್ನೇಹಿತರ ಲಿಸ್ಟಿನಲ್ಲಿ ಹುಡುಗಿಯರು ಕಡಿಮೆ, ಮದುವೆಯಾಗಿರುವ ಹೆಂಗಸರು ಮತ್ತು ಸಹಪಾಠಿಗಳೇ ಹೆಚ್ಚಿದ್ದಾರೆ. ಎಲ್ಲಾ ದೀರ್ಘವಾಗಿ ಪರಾಂಬರಿಸಿ ಫೋಟೋಗಳನ್ನು ಅದರ ಇತ್ಯೋಪರಿಗಳನ್ನು ವಿಶ್ಲೇಷಿಸಿ ಮೂರ್ನಾಲ್ಕು ಜನ ಸೇರಿ ಚರ್ಚೆ ಮಾಡಿ ಒಂದು ವಿವರವಾದ ರಿಪೋರ್ಟ್ ಸಿದ್ಧ ಪಡಿಸಿದರು. ಹುಡುಗ ಹೀಗೇ ಎಂಬ ಒಂದು ಚಿತ್ರಣ ಅದರಿಂದ ದೊರಕಿತ್ತು. ಹುಡುಗನಿಗೆ ಸಿಗರೇಟು, ಹೆಚ್ಚೆಂದರೆ ಕುಡಿಯುವ ಚಟವಿದೆ, ಕನಿಷ್ಟ ಪಕ್ಷ ಒಂದು ದೇವದಾಸನ ಕಥೆಯಿದೆ. ಕೊಂಚ ಹೈಫೈ ಆಗಿ ಯೋಚಿಸುತ್ತಾನೆ ಬಿಟ್ಟರೆ ಸ್ನೇಹಮಯಿ. ಇಷ್ಟನ್ನು ಒಪ್ಪಿಕೊಳ್ಳುವ ಹಾಗಿದ್ದರೆ ಈ ನನ್ನ ಸ್ನೇಹಿತೆ ಮುಂದುವರೆಯಬಹುದಿತ್ತು. ಮೊದಲ ಬಾರಿ ಫೋನಿನಲ್ಲಿ ಮಾತನಾಡುವಾಗಲೇ ಆ ರಿಪೋರ್ಟಿನ ಪ್ರಕಾರವೇ ೯೦% ಹುಡುಗನ ಗುಣ ನಡತೆ ಕಂಡು ಬಂದು ಏನೋ ಇಷ್ಟವಾಗದೇ ಸಂಬಂಧ ಮುರಿದು ಬಿತ್ತು. ಮೊತ್ತೊಂದು ಹುಡುಗನಿಗಾಗಿ ಹುಡುಕಾಟ ಶುರು.
ಮತ್ತೊಬ್ಬ ಸ್ನೇಹಿತನಿಗೆ ಮದುವೆ ಗೊತ್ತಾಗಿತ್ತು, ಮತ್ತು ನಿಶ್ಚಿತಾರ್ಥವೂ ಕೂಡ ಆಗಿತ್ತು. ಒಮ್ಮೆ ಇದ್ದಕ್ಕಿದ್ದಂತೆ ಮದುವೆ ನಿಂತುಹೋಗುವುದರಲ್ಲಿದೆ ಎಂಬ ಸುದ್ದಿ ಬಂತು. ಅರೆ ಎಲ್ಲಾ ಸರಿ ಹೋಗಿ ಜಾತಕ ಕೂಡ ಕೂಡಿ ಬಂದಮೇಲೆಯೇ ಅಲ್ವೇ ಮದುವೆಯ ದಿನಾಂಕ ಗೊತ್ತುಮಾಡಿದ್ದು ಮತ್ಯಾಕೆ ನಿಂತುಹೋಗುವುದೆಂದು ಫೋನು ಮಾಡಿದರೆ ಸ್ವೀಕರಿಸವಲ್ಲನು ಪುಣ್ಯಾತ್ಮ. ಏನು ಮಾಡಿಕೊಂಡನೋ ತಕರಾರು ಸಹಾಯ ಮಾಡೋಣ ಎನ್ನುವುದಕ್ಕಿಂತ ಕುತೂಹಲ ತಾಳಲಾರದೆ ಹೋಗಿ ನೋಡಿದರೆ ಗಂಭೀರ ಸಮಸ್ಯೆಯೇ ಹೌದು. ಮನೆಯಲ್ಲಿ ಎಲ್ಲರ ಮುಂದೆ ಹೇಳಲಾಗದೆ ಮಹಡಿಯ ಮೇಲೆ ಕೂರಿಸಿಕೊಂಡು ನಮಗೆ ಮಾತ್ರ ಕೇಳುವ ಹಾಗೆ ಒಸರಿದ. ಫೇಸ್ಬುಕ್ಕಿನಲ್ಲಿ ಅದ್ಯಾರೋ ವೈಯಕ್ತಿಕವಾಗಿ ಗೊತ್ತಿಲ್ಲದ ಫೇಸ್ಬುಕ್ ಗೆಳತಿ, ಎ ಸರ್ಟಿಫಿಕೇಟ್ ಫೋಟೋ ಹಾಕಿದ್ದಳಂತೆ ಅದಕ್ಕೆ ಕಮೆಂಟ್ ಹೊಡೆದನಂತೆ ಅದನ್ನು ತನ್ನ ಹುಡುಗಿ ನೋಡಿದಳಂತೆ. ಅಂಥವರೆಲ್ಲಾ ಫ್ರೆಂಡ್ಸ್ ಇವನಿಗೆ ಎಂದು ಜಗಳ ಶುರುವಾಯ್ತಂತೆ. ಕೊನೆಗೆ ಇಡೀ ಸಂಸಾರ ಹೋಗಿ ಏನೇನೋ ಮಾತುಕತೆಗಳು ನಡೆಸಿ ಇವನ ಮುಖ ತೋರಿಸಿ ಪಾಪದವನೆಂದು ಪ್ರೂವ್ ಮಾಡಲಾಯ್ತಂತೆ!



ಕ್ರೌರ್ಯ

ಒಬ್ಬ ಇವರಿಗೆ ಕಲ್ಲಿನಿಂದ ಹೊಡೆಯುತ್ತಾನೆ. ಅದಕ್ಕೆ ಇವರು ಪ್ರತೀಕಾರವೆಂಬಂತೆ ಕೋಲಿನಿಂದ ಹೊಡೆಯುತ್ತಾರೆ. ಇವರು ಸುಮ್ಮನಿರದೆ ಫೇಸ್ಬುಕ್ಕಿನಲ್ಲಿ ಹಾಗೆಯೇ ಘೋಷಣೆ ಹೊರಡಿಸುತ್ತಾರೆ ಕೂಡ. ಅವರು ನನಗೆ ಕಲ್ಲಿನಿಂದ ಹೊಡೆದರು, ಅದಕ್ಕೆ ನಾನು ಕೋಲಿನಿಂದ ಹೊಡೆದೆ. ಹಾಗು ಈ ನನ್ನ ಕೆಲಸಕ್ಕೆ ನನಗೆ ಹೆಮ್ಮೆಯಿದೆ. ಇನ್ನೂ ಯಾರಾದರೂ ನನಗೆ ಕಲ್ಲಿನಿಂದ ಹೊಡೆಯುವಂತವರು ನನ್ನ ಫ್ರೆಂಡ್ಸ್ ಲಿಸ್ಟಿನಲ್ಲಿ ಇದ್ದರೆ ತೊಲಗಿ ನಿಮ್ಮನ್ನೂ ಇದೇ ಕೋಲಿನಿಂದ ಹೊಡೆಯುವ ಮುನ್ನ ತೊಲಗಿ ಎಂದು “ನೇರವಾಗಿ” ಹೇಳಿಕೊಳ್ಳುತ್ತಾರೆ. ಯಾರು ಅವರು ಕಲ್ಲು ಹೊಡೆದವರು, ಯಾತಕ್ಕೆ ಹೊಡೆದರು, ಏನು ಕತೆ ಎಂದು ಏನೂ ಗೊತ್ತಿಲ್ಲದೆಯೇ ಇನ್ನೊಂದಷ್ಟು ಜನ ಸರಿಯಾಗಿ ಮಾಡಿದ್ದೀರಿ, ಅಂಥವರಿಗೆ ಕೋಲಿನಲ್ಲಿ ಹೊಡೆಯುವುದಲ್ಲ ಚಾಕುವಿನಲ್ಲಿ ತಿವಿಯಬೇಕಿತ್ತು, ಅದು ಇದು ಎಂದು ಮೆಚ್ಚಿ ಶ್ಲಾಘಿಸಿ, ಕೊಂಡಾಡಿ, ವಿಚಾರ ಮಾಡಿ ಕೋಲಿನಲ್ಲಿ ಹೊಡೆದದ್ದೇ ಸರಿ ಎಂದು ತೀರ್ಮಾನಿಸಿ ಬೆನ್ನು ತಟ್ಟಿ ಖುಷಿ ಪಡಿಸುತ್ತಾರೆ. ಅತ್ತ ಕಲ್ಲು ಹೊಡೆದ ‘ಅವರು’ ತಮ್ಮ ತಪ್ಪು (ಆಗಿದ್ದಲ್ಲಿ) ತಿದ್ದಿಕೊಳ್ಳುವ ಮನೋಭಾವ ಪಡೆಯದೇ ಕೋಲಿನಲ್ಲಿ ಹೊಡೆದ ‘ಇವರ’ ಮೇಲೆ ದ್ವೇಷ ಹುಟ್ಟಿಸಿಕೊಂಡು, ಕೆಂಡ ಕಾರುತ್ತಾರೆ. ಅವರದ್ದೊಂದು ಘೋಷಣೆ ಹೊರಡುತ್ತದೆ. ಅವರದ್ದೊಂದು ಬಳಗ ಅವರನ್ನು ಮೆಚ್ಚಿಸಲಿಕ್ಕೆ. ಎಲ್ಲ ವಯಕ್ತಿಕ ಸಮಸ್ಯೆಗಳು, ನಿಲುವುಗಳು, ಸಾರ್ವಜನಿಕವಾಗಿ ಏಕೆ ಇಷ್ಟು ಸಲೀಸಾಗಿ ಘೋಷಣೆಗಳಾಗುತ್ತಿವೆಯೋ, ಆ ಘೋಷಣೆಯಲ್ಲಿ ಅದರ ಅರಿವೇ ಇಲ್ಲದೇ ಹಿಂಬಾಲಕರು ಸುಲಭವಾಗಿ ಹೇಗೆ ಸೃಷ್ಠಿಯಾಗುತ್ತಿದೆಯೋ ಅರ್ಥವಾಗುತ್ತಿಲ್ಲ. ತಲೆಕೆಟ್ಟು ಲಾಗ್ ಔಟ್ ಮಾಡಿದೆನಷ್ಟೇ!

ಪರಿಚಯ

ಸಾರ್ ನಮಸ್ಥೆ!
ಯಾರು ಗುರ್ತಾಗಲಿಲ್ವಲ್ಲ?
ಸಾರ್ ನಾನು, ನಿಮ್ಮ ಫೇಸ್ಬುಕ್ ಲಿಸ್ಟಲ್ಲಿ ಇದ್ದೇನೆ, ನನ್ನ ಫೋಟೋಗೆ ನೀವು ಲೈಕ್ ಕೂಡಾ ಕೊಟ್ಟಿದ್ರಿ!
ಹೋ, ಹೌದಾ? ಗೊತ್ತಿಲ್ಲ ಇವರೇ. ಏನಾಗುತ್ತೆ ನೋಡಿ ನಾಲ್ಕು ಸಾವಿರ ಸ್ನೇಹಿತರು ಇದ್ದಾರೆ, ಹೇಗೆ ನೆನಪಿಟ್ಟುಕೊಳ್ತೀರಾ, ದಿನಕ್ಕೆ ಇಪ್ಪತ್ತು ಫ್ರೆಂಡ್ಸ್ ರಿಕ್ವೆಸ್ಟ್ ಬರುತ್ತೆ ಒಪ್ಪಿಕೊಳ್ಳುವ ಹಾಗಿಲ್ಲ ನಿರಾಕರಿಸುವ ಹಾಗಿಲ್ಲ, ಉಭಸಂಕಟ. ನಿಮ್ಮ ಹೆಸರು ಏನಂದ್ರೀ?
ಹೀಗೇ ಈಗಿನ ಪರಿಚಯಗಳು ಶುರುವಾಗುತ್ತೆ. ಜನ್ಮದಿನವೆಂದು ಗೊತ್ತಾಗುವುದು ಫೇಸ್ಬುಕ್ಕಿನಿಂದ. ಮದುವೆ ಆಮಂತ್ರಣ ಪತ್ರಿಕೆ ಬರುವುದು ಕೂಡ ಫೇಸ್ಬುಕ್ಕಿನಲ್ಲೇ. ಸ್ನೇಹಿತನೋರ್ವ ಫೋನು ಮಾಡಿದಾಗ ಮಗಾ ಮೈಸೂರಿನಲ್ಲಿದ್ದೇನೆ ಕೊಂಚ ಕೆಲಸದ ಮೇಲೆ ಎಂದರೆ ಮತ್ತೆ ಫೇಸ್ಬುಕ್ಕಿನಲ್ಲಿ ಉಪ್ಡೇಟ್ ಹಾಕಿಲ್ಲಾ? ಎಂದು ಪ್ರಶ್ನಿಸುತ್ತಾನೆ. ಏನೆಂದು ಉತ್ತರಿಸುವುದು ಗೊತ್ತಾಗುವುದಿಲ್ಲ ಈ ನಡುವೆ. ಇನ್ನೊಮ್ಮೆ, ಲೇ ಮದುವೆಗ್ಯಾಕೋ ಬರಲಿಲ್ಲ ಅಂದ್ರೆ, “ಇಂದು ಪ್ರಪ್ರಥಮ ಬಾರಿಗೆ ನನ್ನ ಮನದನ್ನೆಗೆ ಸಿಹಿ ಮುತ್ತೊಂದ ಕೊಟ್ಟೆ” ಎಂದು ಯಾರೋ ನಾಚಿಕೆಗೆಟ್ಟವನು ಹಾಕಿರುವುದನ್ನ ಅದಕ್ಕೆ ಬಂದಿರುವ ಕಮೆಂಟುಗಳನ್ನ ಅಸಂಬದ್ಧವಾಗಿ ವಿವರಿಸಿ ಹಿ ಹಿ ಹಿ ಎಂದು ನಕ್ಕು, ನಿನ್ನ ಹೆಂಡತಿಯ ಫೋಟೋ ಹಾಕೋ ಫೇಸ್ಬುಕ್ಕಿಗೆ ನೋಡ್ಕೋತೇನೆ ಅಂತಾನೆ!

ಅರ್ಥ

ಆತ ಒಂದು ಪೆಟ್ಟಿ ಅಂಗಡಿಯನ್ನಿಟ್ಟಿದ್ದಾನೆ. ಫೇಸ್ಬುಕ್ಕಿನಲ್ಲಿ ಹೀರೋ ಮಾದರಿಯಲ್ಲಿ ಫೋಟೋಶೂಟ್ ಮಾಡಿಸಿ ಹಾಕಿಕೊಂಡಿದ್ದಾನೆ. ಆತನಿಗೆ ಪರಮನೆಂಟ್ ಪ್ರೇಮಿಯೊಬ್ಬಳಿದ್ದಾಳೆ. ಪ್ರತಿನಿತ್ಯ ಈತನ ಹೋಟೆಲಿನಲ್ಲಿ ಇಡ್ಲಿ ಖರ್ಚಾಗುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ಫೇಸ್ಬುಕ್ ಲಾಗಿನ್ ಆಗದ ದಿನ ಇರುವುದಿಲ್ಲ. ಈ ಫೇಸ್ಬುಕ್ ಈತನಿಗೆ “ಎಡ-ಬಲ ಮೇಯಲು” ಅವಕಾಶಗಳನ್ನು ಒದಗಿಸಲಿಕ್ಕಾಗಿ ಮಾಡಿಕೊಂಡಿರುವ ಒಂದು ಮಾಧ್ಯಮ. ಹೋದವಾರ ರೋಸಿ ಎಂಬುವವಳೊಂದಿಗೆ ಸ್ನೇಹಿತನಾದ ಮೂರೇ ದಿನಗಳಲ್ಲಿ ರೋಸ್ ಹಿಡಿದುಕೊಂಡು ರಿಚ್ಮಂಡ್ ವೃತ್ತದಲ್ಲಿ ನಿಂತಿದ್ದ ಮುಂಬಂದ ರವಿವಾರದಂದೇ ಸುಸಮಯ ನೋಡಿ ಅವಳ ಮನೆಗೆ ಹೋಗಿ ಪೂಜೆ ಮಾಡಿ ಬಂದ. ಅದಕ್ಕೂ ಮುಂಚೆ ಮಂಜುಳಾ, ವೀಣಾ, ಖುಷಿಯರೊಂದಿಗೆ ಸ್ನೇಹಿತನಾಗಿದ್ದನಂತೆ. ಈ ವಾರ ಸವಿತಾ ಎಂಬುವವಳೊಂದಿಗೆ ಸ್ನೇಹಿತನಾಗಿದ್ದಾನೆ, ಇವನ ಆರ್ ಎಕ್ಸ್ ಚಕ್ರದ ಬಳಿ ಕುಳಿತು ಸಿಗರೇಟು ಸೇದುತ್ತಾ ಹಿಡಿಸಿಕೊಂಡಿರುವ ಫೋಟೋಗೆ ಸೋ ಕ್ಯೂಟ್ ಎಂದು ಕಮೆಂಟ್ ಕೊಡುತ್ತಿದ್ದಾಳೆ!

ಅಂತ್ಯ

ಹೀಗೇ ಒಬ್ಬರು ಭಯಾನಕ ಹೆಸರು ಮಾಡಿದ ಮಹಾಶಯ ಹೃದಾಯಾಘಾತವಾಗಿ ತೀರಿಹೋದರು. ಕೊನೆಯ ದರ್ಶನಕ್ಕೆಂದು ಸೇರಿದ್ದವರು ಬೆರಳೆಣಿಕೆಯಷ್ಟು ಜನ. ಸಾಯುವ ಕೊನೆಯ ದಿನಗಳಲ್ಲಿ ತುಂಬಾ ಖಾಯಿಲೆಗಳಿಂದ ನರಳುತ್ತಿದ್ದರಂತೆ. ಓಡುವ ಕುದುರೆಯಾಗಿದ್ದಾಗ ಸುತ್ತ ಮುತ್ತ ಹೋದಲ್ಲೆಲ್ಲಾ ಜನರನ್ನೇ ಇಟ್ಟುಕೊಂಡಿದ್ದವರು ಕಾಲು ಸೋತ ನಂತರ ಯಾರೂ ಇಲ್ಲದೇ ಹೀಗೆ ಅಂತ್ಯಕ್ರಿಯೆ ಮಾಡಿಸಿಕೊಂಡು ಹೋದರಲ್ಲಾ ಎಂದು ನೊಂದುಕೊಂಡಿದ್ದೆ. ಈತ ಸಹ ಫೇಸ್ಬುಕ್ಕಿನಲ್ಲಿದ್ದ ಎಂದು ನೆನಪಾಗಿ, ಜೀವನ ಮುಕ್ತಾಯವಾಗಿ ಎಲ್ಲ ಖಾತೆ ಮುಚ್ಚಿಹೋದರೂ ಫೇಸ್ಬುಕ್ ಖಾತೆ ಮಾತ್ರ ತೆರೆದೇ ಇರುವುದಲ್ಲ ಎಂದು ಯೋಚಿಸಿ ಸುಮ್ಮನೆ ಹುಡುಕಿ ನೋಡಿದೆ ರಿಪ್ ರಿಪ್ ರಿಪ್, ತುಂಬಲಾರದ ನಷ್ಟ, we miss you ಎಂದು ಒಂದು ಸಾವಿರಕ್ಕೂ ಹೆಚ್ಚು ಸಂದೇಶಗಳು! ಅರೆರೆ!! ಇದೇನು ನಮ್ಮ ಜನಕ್ಕೆ ತೆವಲೋ, ಖಯಾಲಿಯೋ ಅರ್ಥವಾಗದೇ ತಲೆಕೆಡಿಸಿಕೊಂಡು ಆ ಮಹಾನುಭಾವನ ಹಳೆಯ ಫೋಟೋಗಳನ್ನು ನೋಡುತ್ತಿದ್ದೆ. ಅಷ್ಟರಲ್ಲಿ “ವಂದನೆಗಳು ಎಲ್ಲ ಗೆಳೆಯರು ಮತ್ತು ಆಪ್ತರಿಗೆ” ಎಂದು ಅವರ ಪ್ರೊಫೈಲಿನಿಂದಲೇ ಅಪ್ಡೇಟ್ ಬಂತು!






+ನೀ.ಮ. ಹೇಮಂತ್

Tuesday 3 July 2012

ಕುರ್ಚಿಗಳು!




          ಸೂರ್ಯ ಎಂದಿನಂತೆ ಬೆಳಕನ್ನು ಕಕ್ಕುತ್ತಲಿದ್ದ ಆದರೆ ಇಂದಿನ ಬೆಳಗ್ಗೆ ಎಂದಿನಂತಿರಲಿಲ್ಲ. ಅಪ್ಪ ಅಮ್ಮ, ಅವರ ಎಂಟು ವರ್ಷದ ಮಗ ಎಂದಿನಂತೆಯೇ ಸ್ನಾನಾದಿ ತಿಂಡಿ ತೀರ್ಥಗಳನ್ನು ಗಡಬಡನೇ ಮುಗಿಸಿ ಟಿಫಿನ್ ಬಾಕ್ಸುಗಳನ್ನು ಸಿದ್ಧಗಳೊಸಿಕೊಂಡು, ಮಗ ಶಾಲೆಯ ಸಮವಸ್ತ್ರ, ಅಪ್ಪ ಅಮ್ಮ ಆಫೀಸಿನ ಐಡೆಂಟಿಟಿ ಕಾರ್ಡು, ಊಟದ ಬುತ್ತಿಯನ್ನು ಹೊತ್ತುಕೊಂಡು ಮನೆಯಿಂದ ಹೊರಡುತ್ತಾ ಮೂವರೂ ಒಂದೊಂದು ಕುರ್ಚಿಗಳನ್ನು ಹೊತ್ತುಕೊಂಡು ಮನೆ ಬೀಗ ಹಾಕಿ ಹೊರಡುವರು. ಅಕ್ಕ ಪಕ್ಕದ ಮನೆಯವರೂ ಸಹ ಅದೇ ರೀತಿ ಸಂಸಾರ ಸಮೇತ ಕುರ್ಚಿಗಳನ್ನು ಹೊತ್ತುಕೊಂಡು ಸೈಕಲ್ ಗಳಿದ್ದ ಮಕ್ಕಳು ಸೈಕಲ್ಲಿನಲ್ಲಿ, ದ್ವಿಚಕ್ರವಾಹನಗಳಿದ್ದವರು, ಕಾರಿದ್ದವರು, ಬಸ್ಸಿನಲ್ಲಿ ಹೊರಡುವವರು ಎಲ್ಲರ ಕೈಗಳಲ್ಲೂ ಹೆಗಲ ಮೇಲೂ ಒಂದೊಂದು ಕುರ್ಚಿಗಳು. ಇಡೀ ಊರಿಗೆ ಊರೇ ಒಬ್ಬರನ್ನೊಬ್ಬರು ನೋಡುತ್ತಾ ಮುಗುಳ್ನಗುತ್ತಾ ಗೊತ್ತಿದ್ದವರೊಂದಿಗೆ ಮಾತನಾಡುತ್ತಾ ಬಣ್ಣ ಬಣ್ಣದ ಕುರ್ಚಿಗಳನ್ನು ಹಿಡಿದುಕೊಂಡು ಒಂದೇ ದಾರಿಯಲ್ಲಿ ಸಾಗುತ್ತಿರುವುದು. ದೊಡ್ಡ ಲಾರಿಯೊಂದು ಅದರ ಭರ್ತಿ ಕುರ್ಚಿಗಳನ್ನು ಹೊತ್ತುಕೊಂಡು ಜನರ ನಡುವಿನಲ್ಲಿ ಜಾಗ ಮಾಡಿಕೊಂಡು ಮುಂದುವರೆಯಿತು.

ಸೈಕಲ್ಲುಗಳು, ದ್ವಿಚಕ್ರ ಗಾಡಿಗಳು, ಕಾರು, ಆಟೋ, ಬಸ್ಸುಗಳು, ಲಾರಿಗಳು, ಟೆಂಪೋಗಳು, ಎಲ್ಲವೂ ಕ್ರಮಬದ್ಧವಾಗಿ ಸಾಲಾಗಿ ಒಂದೊಂದು ಕಡೆ ನಿಂತಿರಲು ಇನ್ನೂ ವಾಹನಗಳು ಬಂದು ಸೇರಿಕೊಳ್ಳುತ್ತಿರಲು ಜನರೆಲ್ಲಾ ಕುರ್ಚಿಗಳನ್ನು ವಿಧಾನಸೌಧದ ಸುತ್ತಾ ಹಾಕಿಕೊಂಡು ಒಬ್ಬರ ನಂತರ ಒಬ್ಬರು ಕೂರುತ್ತಿರುವರು. ನೋಡ ನೋಡುತ್ತಿದ್ದಂತೆಯೇ ಒಂದು ಜನಸಾಗರವೇ ಸೇರಿಹೋಗುತ್ತಿಹುದು. ಪೊಲೀಸರೂ ಎಷ್ಟೆಂದು ತಾನೆ ತಡೆದಾರು, ಆದಷ್ಟೂ ಜನರನ್ನು ಪ್ರಶ್ನಿಸಿ, ವಿಧಾನಸೌಧದೊಳಗಡೆ ನುಗ್ಗದಿರಲೆಂದು ಅಡ್ಡಗೋಡೆಗಳನ್ನು ನಿರ್ಮಿಸಿ ಎಲ್ಲೆಲ್ಲಿಂದ ಕರೆಸಲು ಸಾಧ್ಯವೋ ಅಷ್ಟೂ ಜನ ಸಿಬ್ಬಂಧಿಗಳನ್ನು ಸೇರಿಸಿ ಮುಂದೆ ನಿಲ್ಲುವರು. ಯಾಕೆ ಜನ ಸೇರುತ್ತಿದ್ದಾರೆಂದು ಯಾರನ್ನು ಹೇಗೆ ಯಾವ ರೀತಿಯಲ್ಲಿ ವಿಚಾರಿಸಿದರೂ ಯಾರೂ ಬಾಯಿ ಬಿಡದ ಕಾರಣ ತಲೆಕೆಟ್ಟು ಉನ್ನತಾಧಿಕಾರಿಗಳಿಗೆ ಫೋನು, ವೈರ್ ಲೆಸ್ ಮೆಸೇಜುಗಳನ್ನ ಕಳುಹಿಸುತ್ತಾ ಯಾವ ಕ್ರಮ ತೆಗೆದುಕೊಳ್ಳುವುದೆಂದು ತೀರ್ಮಾನಿಸುವುದರಲ್ಲೇ ನಿರತರಾಗಿರುವರು. ಅಷ್ಟರಲ್ಲಿ ಇತ್ತ ನೆರೆದಿದ್ದ ಜನರಿಗೆ ಪ್ರತೀ ಸಾಲಿಗೊಂದೊಂದು ಎರಡೆರಡು ಮೈಕುಗಳನ್ನು ಯಾರು ಯಾರೋ ಸ್ವಯಂಸೇವಕರುಗಳು ಹಂಚಲು ಶುರುಮಾಡುವರು. ದೊಡ್ಡ ದೊಡ್ಡ ಕಪ್ಪು ಸ್ಪೀಕರುಗಳನ್ನು ವಿಧಾನಸೌಧದ ಕಡೆಗೆ ತಿರುಗಿಸಿ ಸುತ್ತಲೂ ನಿಲ್ಲಿಸಲಾಗುವುದು. ಎಲ್ಲಿ ಸಮಸ್ಯೆ ಇದ್ದರೆ ಅಲ್ಲಿ ನಾವಿದ್ದೇವೆ ಎಂದು ಪಣ ತೊಟ್ಟಿರುವಂತಹ ಹಲವು ಬಗೆಯ ಮೀಡೀಯಾ ಪಾರ್ಟ್ನರ್ ಗಳು ಪೆನ್ನು ಪೇಪರು, ಕ್ಯಾಮೆರಾ ಮೈಕುಗಳನ್ನು ಹಿಡಿದು ವಾಸ್ತು ಲೆಕ್ಕ ಹಾಕಿ ವಾಸ್ತವ್ಯ ಹೂಡುವರು. ವಿಧಾನಸೌಧದ ಆವರಣ ಕಾಣಲೂ ಸಹ ಸಾಧ್ಯವಾಗದಷ್ಟು ಹಿಂದೆ ಕುಳಿತಿರುವ ಜನರಿಗೆ ದೊಡ್ಡ ದೊಡ್ಡ ಪರದೆಗಳ ಟಿವಿ ಸಿದ್ಧಗೊಳಿಸಿ ಅದರ ಮೇಲೆ ತಮ್ಮ ತಮ್ಮ ಚಾನಲ್ ಗಳ ಲೋಗೋ ಹಾಕಿ ಜಾಹಿರಾತು ಮಾಡುತ್ತಾ ಮುಂದೆ ವಿಧಾನ ಸೌಧದ ಬಳಿ ಏನು ನಡೆಯುತ್ತಿದೆಯೆಂಬ ಚಿತ್ರಣವನ್ನು ನೇರವಾಗಿ ಬಿತ್ತರಿಸುವರು. ಸಧ್ಯಕ್ಕೆ ಸುಮ್ಮನೆ ಕುಳಿತಿರುವ ಜನ, ಬಾಲ ಸುಟ್ಟ ಬೆಕ್ಕಿನಂತೆ ಓಡಾಡುತ್ತಿರುವ ಪೊಲೀಸರು, ಅಲ್ಲಿ ಇಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವ ವಿಧಾನಸೌಧದ ಕಾವಲು ಸಿಬ್ಬಂಧಿಗಳು ಇಷ್ಟನ್ನೇ ಪರದೆಯ ಮೇಲೆ ನೋಡುತ್ತಾ ಹಿಂದಿರುವ ಜನರೂ ಸಹ ಶಾಂತವಾಗಿಯೇ ಕುಳಿತಿರುವರು.

ಸಾರ್ವಜನಿಕರು ವಿಧಾನಸೌಧಕ್ಕೆ ಲಗ್ಗೆ ಇಡ್ತಿದ್ದಾರೆ! ಸಾಮಾನ್ಯ ಜನರು ತಮ್ಮ ಕುರ್ಚಿಗಳನ್ನ ತಾವೇ ಹೊತ್ತುಕೊಂಡು ಬಂದು ವಿಧಾನಸೌಧಕ್ಕೆ ಘೇರಾವ್ ಮಾಡ್ತಿದ್ದಾರಂತೆ! ವಿಧಾನಸೌಧವನ್ನ ದೂರದಲ್ಲಿ ನಿಂತು ನೋಡಿದ್ರೆ ಬರೀ ಕುರ್ಚಿಗಳೇ ಕಾಣ್ತಿದ್ದಾವಂತೆ. ಜನ ವಿಧಾನಸೌಧವನ್ನ ಕುರ್ಚಿಗಳಿಂದ ದಾಳಿ ಮಾಡ್ತಿದ್ದಾರಂತೆ! ಹೀಗೆ ಎಲ್ಲಾ ಎಮ್ ಎಲ್ ಏ, ಎಮ್ ಪಿ, ಪುಡಿ ರಾಜಕಾರಣಿಗಳಿಗೂ ಸಹ ಕರೆಗಳು ಹೋಗುತ್ತಿರಲು, ಏನು, ಯಾಕೆ ಜನ ಸೇರುತ್ತಿದ್ದಾರೆ ಎಂದು ತಿಳಿಯುವ ಮೊದಲೇ ಈ ತುರ್ತು ಪರಿಸ್ಥಿತಿಯಲ್ಲಿ ಯಾವುದಾದರೂ ರೆಸಾರ್ಟು, ವಿದೇಶೀ ಟೂರು ಹೊರಟುಬಿಟ್ಟರೆ ಹೇಗೆಂದು ತಯಾರಿ ನಡೆಸಲೂ ಸಹ ಕೆಲವರು ಶುರುಮಾಡಿಬಿಡುವರು. ಅಷ್ಟರಲ್ಲಿ ವಿರೋಧ ಪಕ್ಷದವರು ವಿಧಾನಸೌಧಕ್ಕೆ ಜನರ ಮುಂದೆ ನಿಲ್ಲಲು ಹೋಗುತ್ತಿರುವರೆಂದು ಆಡಳಿತ ಪಕ್ಷಕ್ಕೆ, ಮತ್ತು ಆಡಳಿತ ಪಕ್ಷದವರು ಜನರನ್ನು ಎದುರಿಸಲು ಹೋಗುತ್ತಿರುವರೆಂದು ವಿರೋಧ ಪಕ್ಷದ ಅಧ್ಯಕ್ಷರಿಗೆ ಕರೆ ಹೋದದ್ದರಿಂದ, ಇವರಿಬ್ಬರೇ ಹೋಗುತ್ತಿದ್ದ ಮೇಲೆ ನಾವೂ ಹೋಗಿ ನಮ್ಮ ಬೇಳೆಯೂ ಏನಾದರೂ ಬೇಯುವುದೋ ನೋಡೋಣವೆಂದು ಎಡ ಬಲ ಪಕ್ಷದವರೂ ಹೊರಟು ಅಂತೂ ಮಧ್ಯಾಹ್ನದೊಳಗೇ ಎಲ್ಲ ಬಿಳಿ ಟೊಪ್ಪಿಗಳು, ಗರಿ ಗರಿ ಗಂಜಿ ಬಟ್ಟೆಗಳೂ ಪಾನ್ ಪರಾಗು, ಗುಟ್ಖಾ ನಮಲುತ್ತಿದ್ದ ಗಲೀಜು ಹಲ್ಲುಗಳನ್ನು ತೆರೆದುಕೊಂಡು ದಪ್ಪ ದಪ್ಪ ಉಂಗುರಗಳ ಬೆರಳುಗಳನ್ನು ಜೋಡಿಸಿ ನಿಂತು ಮುಂದೇನು ಎಂಬಂತೆ ನೋಡುವರು. ತಣ್ಣಗೆ ಮಲಗಿದ್ದ ಈ ನಮ್ಮ ಬೆಂಗಾಡಿನ ಜನ ಧಿಡೀರನೆ ಇಂದು ಎದ್ದು ಈ ವಿಧಾನಸೌಧವೆಂಬ ವಿಧಾನಸೌಧದ ಮುಂದೆ ಎಲ್ಲ ರಾಜಕಾರಿಣಿಗಳನ್ನ ಗುಡ್ಡೆ ಹಾಕಿಕೊಂಡು ಕರೀ ಸ್ಪೀಕರ್ ಗಳನ್ನು ಮೊಟ್ಟ ಮೊದಲ ಬಾರಿಗೆ ರಾಜಕಾರಿಣಿಗಳೆಡೆಗೆ ತಿರುಗಿಸಿ ಮೈಕುಗಳನ್ನು ತಮ್ಮ ಬಳಿ ಹಿಡಿದಿಟ್ಟುಕೊಂಡು, ತಮ್ಮ ಕುರ್ಚಿಗಳನ್ನು ತಾವೇ ತಂದು ಕುಳಿತಿರುವುದಾದರೂ ಯಾಕೆ? ನೀವೇ ನೋಡಿ ಸಣ್ಣ ಬ್ರೇಕ್ ನ ನಂತರ ಎಂದು ಅವನಾರೋ ಕ್ಯಾಮೆರಾ ಮುಂದೆ ಅರಚುತ್ತಿದ್ದಂತೆಯೇ ಮುಖ್ಯಮಂತ್ರಿಗಳು ಮುಂದೆ ಬಂದು ಹಿ ಹಿ ಹಿ ಎಂದು ಹಲ್ಲು ಕಿರಿದೇ ಬಿಡುವರು.

ಮುಖ್ಯಮಂತ್ರಿಗಳು ಮಾತಿಗೆ ಮೊದಲಾಗುವ ಮುನ್ನ ತುಂಬಾ ಹಿಂದೆ, ಮುಖ್ಯಮಂತ್ರಿಗಳ ಎತ್ತರಕ್ಕೆ ಕಾಣದಷ್ಟೂ ದೂರದಲ್ಲಿ ಕುಳಿತಿರುವವನೊಬ್ಬ ಮೈಕು ಹಿಡಿದು ಮಾನ್ಯ ಜನಪ್ರತಿನಿಧಿಗಳೇ ನಮ್ಮ ಮನೆಯಲ್ಲಿ ಬೆಳಗ್ಗಿನ ಹೊತ್ತು ಚಿತ್ರಾನ್ನ, ವಾಂಗಿಬಾತ್, ಪುಳಿಯೋಗರೆಗಳನ್ನ ಮಾಡುವುದು ಬಿಟ್ಟು ತುಂಬಾ ದಿನಗಳು ಕಳೆದಿವೆ, ಬ್ರೆಡ್ಡು ಜಾಮ್ ಈಗೀಗ ಓಟ್ಸ್ ತಿನ್ನುವ ಹಾಗೆ ಮಾಡಿದ್ದೀರಿ, ಇನ್ನು ರಾತ್ರಿಯ ಹೊತ್ತು ಮಧ್ಯಾಹ್ನದ ಊಟವನ್ನೇ ಬಿಸಿ ಕೂಡ ಮಾಡದೇ ತಿನ್ನುವ ಗತಿ ಕೂಡ ಪದೇ ಪದೇ ಸ್ಟೋವು ಹಚ್ಚಿದರೆ ಇಂಧನ ಬೇಗ ಖಾಲಿಯಾದರೆ ಬ್ಲ್ಯಾಕಿನಲ್ಲಿ ತರಲು ನಮ್ಮಲ್ಲಿ ಶಕ್ತಿಯಿಲ್ಲ, ಅಕ್ಕ ಪಕ್ಕದ ರಾಜ್ಯಗಳಲ್ಲಿ, ಇಲ್ಲಿ ಸಿಗರೇಟು ಸಿಗುವ ದರದಲ್ಲಿ ಅಕ್ಕಿ ಕೊಡಲಾಗುತ್ತಿದೆ, ನಾವೂ ಅವರಂತೆ ಎಲ್ಲೆಲ್ಲಿಂದಲೋ ಇಲ್ಲಿಗೆ ವಲಸೆ ಬಂದವರಲ್ಲ, ಇಲ್ಲೇ ಹುಟ್ಟಿ ಬೆಳೆದಿರುವುದರಿಂದ ಬೇರೆ ಕಡೆ ಹೋಗುವ ಮನಸ್ಸೂ ಬರುತ್ತಿಲ್ಲ ನಮ್ಮಂತಹವರ ಊಟದ ಗತಿ ಏನು ನೀವು ಏನಾದರೂ ಪರಿಹಾರವನ್ನ ಹೇಳ್ತೀರಾ? ಎಂದು ಕೇಳಿದ್ದು ಮುಂದಿನ ಕರಿಪೆಟ್ಟಿಗೆಗಳಲ್ಲಿ ಮುಂದೆ ನಿಂತಿದ್ದ ಮುಖ್ಯಮಂತ್ರಿಗಳ ಕಿವಿ ತೂತು ಬೇಳುವಂತೆ ಕೇಳಿಸುತ್ತಿದ್ದುದರಿಂದ ಹಿಂದೆ ಸರಿದು ತನ್ನ ಸಹಪಾಠಿಗಳನ್ನು ಸೇರುವರು. ಇದಕ್ಕೆ ಯಾರು ಏನು ಉತ್ತರಿಸಬಹುದೆಂದು ಸಮಾಲೋಚನೆ ಶುರುವಾಗುವುದು. ಮುಂದೆ ಗುಸು ಗುಸು ಪಿಸ ಪಿಸ ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದ ಬುದ್ಧಿವಂತರುಗಳನ್ನು ಮತ್ತೊಬ್ಬ ಸಾರ್ವಜನಿಕನ ಪ್ರಶ್ನೆ ಸ್ತಬ್ಧಗೊಳಿಸುವುದು. ಒಬ್ಬ ಸರ್ಕಾರಿ ಆಸ್ಪತ್ರೆಗಳ ಸಮಸ್ಯೆ ಬೆಗ್ಗೆ ಪ್ರಸ್ನಿಸಿದರೆ, ಮತ್ತೊಬ್ಬ ಸರ್ಕಾರಿ ಶಾಲೆಯ ಬಗ್ಗೆ ಪ್ರಶ್ನಿಸುವನು, ಸರ್ಕಾರಿ ಕಛೇರಿಗಳಲ್ಲಿನ ಲಂಚದ ಬಗ್ಗೆ, ರಸ್ತೆ, ಡಿನೋಟಿಫಿಕೇಶನ್, ಗಣಿಗಾರಿಕೆ ಹೀಗೆ ಒಬ್ಬರ ನಂತರ ಒಬ್ಬರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಸುರಿಯುತ್ತಿರಲು ರಾಜಕಾರಣಿಗಳ ಗುಂಪಿನಿಂದ ಒಬ್ಬ ಮುಂದೆ ಬಂದು ಒಂದು ಮೈಕನ್ನು ಕೇಳಿ ಪಡೆದು, ನೋಡಿ ಮತ ಬಾಂಧವರೇ, ನಿಮ್ಮ ಕಷ್ಟ ನಮಗೆ ಅರ್ಥವಾಗುತ್ತೆ. ನಾವು ನಿಮ್ಮ ಸೇವೆಗಾಗಿಯೇ ಶ್ರಮಿಸುತ್ತಿದ್ದೇವೆ ಎಂದು ಸಾಧ್ಯವಾದಷ್ಟೂ ಜೋರಾಗಿಯೇ ಹೇಳುವನು ಆ ಧ್ವನಿ ಮತ್ತೆ ತಮ್ಮ ಕಡೆಗೇ ಪ್ರತಿಧ್ವನಿಸಿತ್ತಿದ್ದರೂ ಕಷ್ಟ ಪಟ್ಟು ಸಹಿಸಿಕೊಂಡು ಮಾತುಮುಂದುವರೆಸುವಷ್ಟರಲ್ಲಿ ಒಬ್ಬ ಮಾತಿಗೆ ಅನುವಾಗುವನು. ಏನ್ರೀ ಮಾಡ್ತಿದ್ದೀರಿ? ನಾವುಗಳೂ ನೋಡ್ತಾನೇ ಇದ್ದೀವಿ. ನಿಮ್ಮ ನಿಮ್ಮ ಪಕ್ಷಗಳೊಳಗೆ ಕಿತ್ತಾಡುವುದರಲ್ಲಿ, ಆ ಪಕ್ಷದವರು ನಿಮ್ಮ ಮೇಲೆ ಗೂಬೆ ಕೂರಿಸುವುದರಲ್ಲಿ, ನೀವು ಇನ್ನೊಂದು ಪಕ್ಷದವರನ್ನ ಜೈಲಿಗೆ ಹಾಕಿಸುವುದರಲ್ಲಿ ಇಷ್ಟೇ ಆಗೋಯ್ತಲ್ಲಾ. ಯಾವಾಗ ನಿಮಗೆ ನಮ್ಮ ಕಡೆ ಗಮನ ಕೊಡೋಕೆ ಸಮಯ ಸಿಗುತ್ತೆ ಎಂದು ನೇರವಾಗಿ ಪ್ರಶ್ನಿಸುವನು. ಆ ಮುಂದೆ ನಿಂತಿದ್ದ ರಾಜಕಾರಣಿಗೆ ಬೆಂಬಲ ನೀಡಲೆಂಬಂತೆ ಇನ್ನೊಬ್ಬ ಬಂದು ಮೈಕಿನಲ್ಲಿ, ನೋಡಿ ಒಂದು ಪಕ್ಷ ನಡೆಸುವುದು ನೀವಂದುಕೊಂಡಷ್ಟು ಸುಲಭವಲ್ಲ, ರಾಜಕೀಯ ತುಂಬಾ ಕ್ಲಿಷ್ಟವಿರ್ತದೆ, ನೀವು ಒಮ್ಮೆ ಬಂದು ನಮ್ಮ ಕುರ್ಚಿಯಲ್ಲಿ ಕೂತು ನೋಡಿ, ನಮ್ಮ ಕಷ್ಟ ನಿಮಗೆ ಗೊತ್ತಾಗುತ್ತೆ ಎನ್ನುವ ಧೈರ್ಯ ಮಾಡಿ ಬೆವರೊರೆಸಿಕೊಳ್ಳುವನು. ಅದಕ್ಕೆ ಜನಸಾಗದರದಲ್ಲೆಲ್ಲೋ ಇನ್ನೊಬ್ಬ ಉತ್ತರಿಸುತ್ತಾ ಸರಿ ಹಾಗಿದ್ರೆ ನೀವುಗಳು ನಿಮ್ಮ ಕಷ್ಟ ಸುಖ ನೋಡ್ಕೊಂಡು ಹೊರಡಿ ಹಾಗಾದ್ರೆ, ನಿಮ್ಮ ನಿಮ್ಮಲ್ಲಿನ ಜಗಳ, ಕಿತ್ತಾಟಗಳು ತೀರ್ಮಾನಕ್ಕೆ ಬಂದಮೇಲೆ ವಾಪಾಸು ಬನ್ನಿ, ಅಲ್ಲಿಯವರೆಗೂ ನಾವೇ ಆಡಳಿತ ನಡೆಸಿಕೊಳ್ತೀವಿ ಎನ್ನಲು ವಿರೋಧ ಪಕ್ಷದ ನಾಯಕರು ಮುಂದೆ ಬಂದು ಮೈಕು ಕಿತ್ತುಕೊಂಡು ನೋಡಿ ನಾವು ಮುಂಚಿನಿಂದಲೇ ಹೇಳ್ತಾ ಬಂದಿದ್ದೀವಿ ಈ ಪಕ್ಷ ದಕ್ಷ ಆಡಳಿತ ನಡೆಸೋದಕ್ಕೆ ಸಮರ್ಥವಾಗಿಲ್ಲ ಅಂತ ಎಂದು ಏನೋ ಹೇಳಲು ಅನುವಾದವನನ್ನು ಒಬ್ಬ ಒಂದಷ್ಟು ಜನ ಒಟ್ಟಿಗೆ ತಡೆದು ಸುಮ್ಮನಿರಿ ಸಾರ್ ಅವರು ಆಡಳಿತ ಪಕ್ಷಕ್ಕೆ ಅರ್ಹರಲ್ಲ ಅಂದ್ರೆ, ನೀವು ಸಹ ವಿರೋಧ ಪಕ್ಷಕ್ಕೂ ಸಹ ಅರ್ಹರಲ್ಲ. ನಾವು ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿ ಮಾತನಾಡಲು ಬಂದಿಲ್ಲ. ನಮಗೆ ನೀವೆಲ್ಲಾ ಒಂದೇ ತಕ್ಕಡಿಯಲ್ಲಿನ ಕಪ್ಪೆಗಳ ತರಹ ಕಾಣೋಕೆ ಶುರುವಾಗಿದ್ದೀರಿ. ಜನ ರಾಜಕಾರಣಿಗಳೆಂದರೆ ಹಾಸ್ಯ ಮಾಡಿ ನಗುವ ಮಟ್ಟಿಗೆ ಆಗಿದೆ. ನೀವು ಒಂದು ಸಂಘಟನೆಯನ್ನ, ಒಂದು ಊರನ್ನ, ಒಂದು ರಾಜ್ಯವನ್ನ, ಒಂದು ಪಕ್ಷವನ್ನ ಪ್ರತಿನಿಧಿಸುತ್ತಿದ್ದೀರ ಅಂತ ನೀವು ಮರೆತಿದ್ದೀರೋ ಏನೋ ಗೊತ್ತಿಲ್ಲ ಒಟ್ಟಿನಲ್ಲಿ ನೀವುಗಳು ಅಕಸ್ಮಾತ್ತಾಗಿ ಟಿವಿ ಪೇಪರ್ ಗಳಲ್ಲಿ ಕಾಣಿಸಿಕೊಂಡರೂ ನಮಗೆ ಇನ್ನಾವ ಸ್ಕ್ಯಾಮ್ ಹೊರಗೆ ಬಂತೋ ಇನ್ನಾವ ಹಣ ಲೂಟಿ ಮಾಡಿದ್ದರ ವಿಷಯ ಹೊರಗೆ ಬಂತೋ, ಇನ್ನಾವುದರ ಬೆಲೆ ಹೆಚ್ಚಳವಾಯ್ತೋ ಎಂದು ಹೆದರಿಕೊಂಡೇ ನೋಡಬೇಕಾಗುತ್ತೆ ಎಂದು ಸಾರ್ಮಜನಿಕರು ತಮ್ಮ ಅಳಲನ್ನು, ಕ್ರೋಧವನ್ನು ತೋಡಿಕೊಳ್ಳುತ್ತಿರುವಂತೆಯೇ, ರಾಜಕಾರಣಿಗಳು ಬೆವರೊರೆಸಿಕೊಳ್ಳಿತ್ತಿದ್ದಂತೆಯೇ ಸೂರ್ಯ ಬೆಳಕನ್ನ ಸ್ಟ್ರಾ ಹಾಕಿ ಹೀರಿಕೊಂಡು ಬಿಡುವನು. ಕುರ್ಚಿಗಳು, ಕ್ಯಾಮರಾಗಳು, ಸ್ಪೀಕರ್ ಗಳು, ಗಾಡಿಗಳು, ಬಾಡಿಗಳು ಎಲ್ಲವೂ ನೋಡನೋಡುತ್ತಿದ್ದಂತೆ ಮಾಯವಾಗಿಬಿಡುವವು. ಸಾರ್ವಜನಿಕರು ಮನೆ ಸೇರಿಕೊಳ್ಳುವರು, ರಾಜಕಾರಣಿಗಳು ಮತ್ತೊಂದು ಸ್ಕ್ಯಾಮಿನಲ್ಲಿ ಕಾಣಿಸಿಕೊಳ್ಳುವರು. 

                                                                   +ನೀ.ಮ. ಹೇಮಂತ್



Thursday 28 June 2012

50 : 50!!




         ತ ನನ್ನ ತಲೆಯೊಳಗಡೆ ಮೂಕನಂತೆ ಕುಳಿತಿರುವ ವಿಚಿತ್ರ ಆಸಾಮಿ. ಮೂಕನೇನೂ ಅಲ್ಲ ಮಾತನಾಡಲು ಶುರುಮಾಡಿದನೆಂದರೆ ಅದಕ್ಕೆ ಕೊನೆಮೊದಲಿರುವುದಿಲ್ಲ. ನನ್ನ ಇಡೀ ತಲೆಯಲ್ಲಿನ ಪ್ರಪಂಚವನ್ನೇ ಅಲ್ಲೋಲಕಲ್ಲೋಲವೆಬ್ಬಿಸುವ ಶಕ್ತಿ ಈತನಿಗುಂಟು. ಇವನ ತಂಟೆಗೆ ನಾನು ಹೋಗುವುದು ತುಂಬಾ ಕಡಿಮೆ. ಪಕ್ಕಾ ಹುಚ್ಚ. ಇವನ ಮಾತುಗಳು ನನಗೇ ಒಪ್ಪಿಗೆಯಾಗುವುದಿಲ್ಲ ಇನ್ನು ಇತರರಿಗೆ ಎಲ್ಲಿಂದ ಒಪ್ಪಿಗೆಯಾಗಬೇಕು. ಅದಕ್ಕೇ ಮೂಲೆಗಟ್ಟಿದ್ದೆ. ಆತನೂ ಸಹ ನಾನಾಗಿ ನಾನೇ ಕೆಣಕದ ಹೊರತು ನನ್ನ ಸಹವಾಸಕ್ಕೆ ಬರುತ್ತಿರಲಿಲ್ಲ. ಆದರೆ ಇಂದು ಯಾಕೋ ಕೊಂಚ ಸಮಯವಿದ್ದಿದ್ದರಿಂದ ಕುಶಲೋಪರಿ ವಿಚಾರಿಸೋಣವೆಂದುಕೊಂಡೆ. ಅದೇ ನಾನು ಮಾಡಿದ ಮಹಾಪರಾಧ. ಮಾತು ಕೆಲಸ, ಪ್ರೇಮ, ಮದುವೆ, ಸಂಸಾರ, ಜೀವನ, ಮನೆ, ಎಲ್ಲಾ ಕಡೆ ಉರುಳಿ ಕೊನೆಗೆ ಗಂಡು ಮತ್ತು ಹೆಣ್ಣಿನ ಬಗ್ಗೆ ನಿಂತುಕೊಂಡಿತು. ಕೊಂಚ ಸಮಯ ಮೌನವಾಗಿ ಒಂದೆಡೆ ದಿಟ್ಟಿಸುತ್ತಾ ಕುಳಿತ. ಮತ್ತೇನೋ ಕಾದಿದೆ ನನಗೆ ಎಂದು ಆ ಮೌನದಲ್ಲೇ ಖಾತ್ರಿಯಾಯ್ತು. ಅಂದುಕೊಂಡಿದ್ದಂತೆಯೇ ಮೊದಲು ನನ್ನೆಡೆಗೆ ನಿಧಾನಕ್ಕೆ ಕಣ್ಣು ಹೊರಳಿಸಿ ಏನೋ ಹೇಳಲಿರುವವನೆಂಬಂತೆ ಕೈಯನ್ನು ನಿಧಾನಕ್ಕೆ ಮೇಲಕ್ಕೆ ಎತ್ತಿ ಶುರುಮಾಡಿದ. ಈ ಗಂಡು ಹೆಣ್ಣು ಅನ್ನೋ ನಂಬಿಕೇನೇ ಸುಳ್ಳು ಕಣೋ ಎಂದ. ತೊಗೋಳಪ್ಪಾ ಎಲ್ಲಾದ್ರೂ ಹೇಳಿಬಿಟ್ಟೀಯಾ ಮಾರಾಯ ತಲೆ ಹೋಳಾದೀತು ಅಂದೆ. ನನ್ನ ಮಾತಿಗೆ ತಲೆ ಕೆಡಿಸಿಕೊಳ್ಳದೇ ಮುಂದುವರೆಸಿದ. ನೀನು ನಂಬಿರುವುದು ಖಂಡಿತಾ ತಪ್ಪು. ಗಂಡು ಗಂಡಲ್ಲಾ, ಹೆಣ್ಣು ಹೆಣ್ಣಲ್ಲಾ ಅಂದ. ಇವನ ಬಳಿ ಮಾತನಾಡಲು ಬಂದೆನಲ್ಲಾ ನನಗೆ ಹುಚ್ಚಷ್ಟೇ. ಇದು ಬೇಕಿತ್ತಾ ನನಗೆ ಎಂದುಕೊಳ್ಳುತ್ತಲೇ ಲೋ ಅಪ್ಪಾ ಮಾರಾಯ ಇಡೀ ಪ್ರಪಂಚದಲ್ಲಿ ಇರುವುದೆರಡೇ ಜಾತಿ ಒಂದು ಗಂಡು ಜಾತಿ ಇನ್ನೊಂದು ಹೆಣ್ಣು ಜಾತಿ ಅಂತ ಎಲ್ಲ ಬಲ್ಲವರೂ, ಜಾತ್ಯಾತೀತವಾದವರೂ, ಮಾನವಕುಲಕ್ಕೆ ಸೇರಿದವರೂ, ಬುದ್ಧಿವಂತರುಗಳೂ, ತತ್ವಜ್ಞಾನಿಗಳೂ, ಮಹಾ ಪುರುಷರೂ ಹೇಳಿರುವ ಮಾತಿದು, ನೀನೇನಪ್ಪಾ ಅಂದರೆ ಗಂಡು ಹೆಣ್ಣು ಅನ್ನೋ ಜಾತಿ ಕೂಡ ಇಲ್ಲಾ ಅಂತ ಹೇಳೋಕೆ ಹೊರಟಿದ್ದೀಯಾ? ಸುಮ್ಮನಿದ್ದು ಬಿಡು ಇವಾಗ ಜಾಸ್ತಿ ತಲೆ ತಿನ್ನಬೇಡ ಎಂದೇನೋ ಹೇಳಿ ಎದ್ದು ಹೊರಟೆ.

ಆದರೆ, ಯಾಕೆ ಹಾಗೆ ಹೇಳ್ತಿದ್ದಾನೆ. ಇದೇ ಮೊದಲ ಬಾರಿಗೆ ಹೀಗೆ ಯಾರಾದರೂ ಹೇಳಿರುವುದು ನನಗೆ. ಏನವನ ವಿಚಾರ ತಿಳಿದೇ ಬಿಡೋಣವೆಂದು ಮತ್ತೆ ಕುಳಿತೆ. ಅವನಿಗೆ ಮುಂಚಿತವಾಗಿಯೇ ಗೊತ್ತಿತ್ತೆನಿಸುತ್ತೆ ನಾನು ಮತ್ತೆ ಬಂದು ಕೂರುವೆನೆಂದು. ತನ್ನ ಲಹರಿಯಲ್ಲೇ ಕಳೆದುಹೋಗಿದ್ದವನು ಹೊರಬಂದು, ‘ನೋಡು ಎಲ್ಲರೂ ಮನುಷ್ಯರಷ್ಟೇ ಪ್ರತಿಯೊಬ್ಬರಲ್ಲೂ ಗಂಡು ಹೆಣ್ಣು ಎರಡೂ ಅಂಶಗಳಿರುತ್ತವೆ’ ಅಂತ ಒಂದು ವೇದಾಂತ ಬಿಟ್ಟ. ನಗೆ ತಡೆಯಲಾಗಲಿಲ್ಲ. ಹೊಟ್ಟೆ ಹಿಡಿದು ನಗಲಾರಂಭಿಸಿದೆ. ಅವನು ನನ್ನ ನೋಡಿ ಕೊಂಚವೇ ನಕ್ಕ. ಸುಮ್ಮನಾದೆ. ಅವನ ಪ್ರವಚನ ಮುಂದುವರೆಯಿತು. ಸಮಯಕ್ಕಾನುಸಾರವಾಗಿ ಯಾವ ಮನುಷ್ಯ ಬೇಕಾದರೂ ಹೆಣ್ಣಾಗಬಹುದು ಗಂಡು ಕೂಡ ಆಗಬಹುದು. ಅದು ಹೇಗೆ? ದೇಹದ ವಿನ್ಯಾಸವನ್ನಾಧರಿಸಿ ಅಂದರೆ ದೇಹ ಹೊತ್ತಿರುವ ಭಾಗಗಳಿಗನುಸಾರವಾಗಿ ಲಿಂಗ ಇದ್ದರೆ ಗಂಡು ಯೋನಿ ಇದ್ದರೆ ಹೆಣ್ಣು, ಎದೆ ಇದ್ದರೆ ಗಂಡು, ಮೊಲೆಯಿದ್ದರೆ ಹೆಣ್ಣು ಎಂದು ಪರಿಗಣಿಸುತ್ತೀವಿ. ಆದರೆ ಅದು ಕಾಲು ಭಾಗ ಸತ್ಯವಷ್ಟೇ. ಅಂದರೆ ಇಪ್ಪತ್ತೈದು % ಗಂಡು ಅಥವಾ ಹೆಣ್ಣು ಸತ್ವವನ್ನು ಹೊತ್ತಿರುವ ಮನುಷ್ಯನಷ್ಟೇ. ಇನ್ನು ಮಿಕ್ಕ ಎಪ್ಪತ್ತೈದು% ಮನಸ್ಸಿಗೆ ಸಂಬಂಧ ಪಟ್ಟಿದ್ದು. ನನ್ನ ಬಾಯಿ ತೆರೆದುಕೊಂಡಿದ್ದು ಹಾಗೇ ಇತ್ತು. ಸೊಳ್ಳೆಗಳು ಒಳಹೊಕ್ಕು ಹೊರಬರುತ್ತಿದ್ದವೇನೋ ಅದರ ಕಡೆ ಪರಿವೆಯೇ ಇರಲಿಲ್ಲ. ಅಂದರೆ, ಲಿಂಗವನ್ನು ಹೊತ್ತಿರುವವನೂ ಸಹ ಹೆಣ್ಣಾಗಿರಬಹುದಾದ ಎಲ್ಲಾ ಸಾಧ್ಯತೆಗಳೂ ಇವೆ. ಯಪ್ಪಾ!!!!! ತಲೆ ಕೆಸರಿನಲ್ಲಿ ಅದ್ದಿ ಕಚ ಕಚ ಕಚನೆ ತುಳಿದು ಎತ್ತಿದ ಹಾಗಾಯ್ತು. ಕೂದಲುಗಳು ಪರಪರಪರ ಕಿತ್ತುಕೊಂಡು ಅದೇನು ಹೇಳುತ್ತಿದ್ದನೋ ಪುಣ್ಯಾತ್ಮ ಎಂದು ಅವನನ್ನೇ ನೋಡುತ್ತಾ ಹಾಗಾದ್ರೆ ನಾನು ಯಾರು ತಂದೆ ಅಂದೆ. ನೀನು ಎಪ್ಪತ್ತೈದು % ಗಂಡು ೨೫% ಹೆಣ್ಣು ಅಂದ, ಕಾಲಿನಲ್ಲಿರುವ ಮೆಟ್ಟು ಕಿತ್ತು ಅವನ ಮುಖಕ್ಕೆ ಎಸೆಯಬೇಕೆಂದುಕೊಂಡವನು ಸುಧಾರಿಸಿಕೊಂಡು, ಹಾಗಾದರೆ ನಮ್ಮಪ್ಪ ಅಂದೆ ಅರವತ್ತೈದು % ಗಂಡು, ಮುವತ್ತೈದು % ಹೆಣ್ಣು ಅಂದ, ನಮ್ಮಮ್ಮ ಅಂದೆ ಅರವತ್ತೈದು % ಹೆಣ್ಣೂ ಮುವತ್ತೈದು % ಗಂಡು ಎಂದ. ಬಾಯಿಗೆ ತರ್ಮಾಮೀಟರ್ ಇಟ್ಟಿದ್ದಿದ್ದರೆ ಕೋಪದ ಶಾಕಕ್ಕೇ ಒಡೆದು ಚೂರುಚೂರಾಗುತ್ತಿತ್ತು. ಯಾಕೆ ಅಂದೆ ಅಷ್ಟೇ? ನಿಮ್ಮಪ್ಪನದ್ದು ನೋಡಲು ಒರಟಾದರೂ ಮೃದು ಸ್ವಭಾವ, ನಿಮ್ಮ ಸಂಸಾರದಲ್ಲಿ ಯಾರಿಗೆ ಏನೇ ಆಪತ್ತಾದರೂ ಹೆಚ್ಚು ಘಾಸಿಯಾಗುವುದು ನಿನ್ನ ತಂದೆಗೇನೇ. ನಿಮ್ಮಮ್ಮ ನೋಡಲು ಸೌಮ್ಯ, ಆದರೆ ಗಟ್ಟಿ ಹೆಂಗಸು ಇಲ್ಲವಾದಲ್ಲಿ ನಿಮ್ಮಗಳನ್ನ ಸಾಕಲು ನಿಮ್ಮಪ್ಪನಿಂದ ಸಾಧ್ಯವೇ ಆಗುತ್ತಿರಲಿಲ್ಲ.

ನಾನೂ ಯೋಚನೆಗೊಳಗಾದೆ, ಹೌದು ಇವನು ಹೇಳುತ್ತಿರುವುದೇನೋ ಸರಿ ಆದರೆ ನಾನು ೨೫% ಹೆಣ್ಣೆಂದು ಒಪ್ಪಿಕೊಳ್ಳಲು ಕೊಂಚ ಕಸಿವಿಸಿಯಾಯ್ತು. ಹಾಗಾದರೆ ನೀನು ಎಷ್ಟು % ಗಂಡು ಎಂದು ಅವನನ್ನೇ ಪ್ರಶ್ನಿಸಿದೆ. ನಾನು ೧೦೦% ಗಂಡು ಕೆಲವು ಸಲ ೧೦೦% ಹೆಣ್ಣು ಕೆಲವು ಸಲ ಎಂದು ದಿಟ್ಟವಾಗಿ ಉತ್ತರಿಸಿದ. ನನಗೆ ಇವನ ಮಾತುಗಳು ಕೊಂಚವೂ ರುಚಿಸುವುದಿಲ್ಲ ಆದರೂ ಎಲ್ಲವನ್ನೂ ಕೇಳುತ್ತೇನೆ ಬೇರೆ ವಿಧಿಯಿಲ್ಲ. ತೇಜಸ್ವಿ ಅವರು ಎಂದೆ. 60% ಗಂಡು 40% ಹೆಣ್ಣು ಎಂದ. ಭಟ್ಟರು? 73%,27%. ಐಶ್ವರ್ಯ 40,60. ರಾಜಕಾರಿಣಿಗಳು 90,10(ಅಂದಾಜು). ಪೊಲೀಸರು 88,22 (ಅಂದಾಜು), ಕ್ರಿಯಾಶೀಲರು 100,100 (ಅಂದಾಜು), ಸಾಧುಗಳು 100,100 (ಅಂದಾಜು), ವಿದ್ಯಾರ್ಥಿಗಳು 59, 41 (ಅಂದಾಜು), ಭಾರತೀಯರು 60,40 (ಅಂದಾಜು), ವಿದೇಶೀಯರು 50,50 (ಅಂದಾಜು). ಇವನ ಸಮೀಕ್ಷೆ, ಅನ್ವೇಷಣೆ ಹುಚ್ಚುತನವೆಂದು ಗೊತ್ತಿದ್ದರೂ ನಾನು ಕೇಳುತ್ತಾ ಹೋಗಿದ್ದು ನನ್ನ ಮೂರ್ಖತನವಷ್ಟೇ.  

 ಹಾಗಾದರೆ ಗಂಡು ಹೆಣ್ಣೆಂದರೆ ಹೇಗೆ ವಿಭಜಿಸುತ್ತೀಯ? ಎಂದೆ. ವಿಕೃತಿ, ಕ್ರೋಧ, ಕ್ರೌರ್ಯ, ಧೈರ್ಯ, ಒರಟುತನ, ಗಟ್ಟಿತನ, ಹುಂಬತನ, ಸುಳ್ಳುಬುರುಕುತನ, ಮೋಸಗಾರಿಕೆ, ಕೊಲೆಪಾತಕತನ, ಹಾದರಿಕೆ, ಕಳ್ಳತನ, ಮೆರೆಯುವಿಕೆ, ಜಂಭ, ಅಧಿಕಾರೀ ನಡವಳಿಕೆ ಇತರೆ ಇತರೆ ಇತರೆ ಇದು ಗಂಡಸ್ತನ. ಹೆಣ್ತನವೆಂದರೆ ಸೌಂದರ್ಯ, ತ್ಯಾಗ, ಹೆದರುವಿಕೆ,ಸಹಿಶ್ಣುತೆ, ತಾಳ್ಮೆ, ಸಹನೆ, ನಗು, ಕನಸು, ಮೃದುತ್ವ, ಇತರೆ ಇತರೆ ಇತರೆ. ಹಾಗಾದರೆ ನೀನು ಹೇಳ್ತಿರೋದು ಪ್ರಬಲವಾದದ್ದು ಗಂಡು, ದುರ್ಬಲವಾದದ್ದು ಹೆಣ್ಣು ಅಂತಲೋ ಎಂದೆ. ಸುಮ್ಮನೆ ನಕ್ಕ. ಯಾವುದು ದುರ್ಬಲ ಮತ್ತೆ ಯೋಚನೆ ಮಾಡಿ ನೋಡು ಎಂದ. ನನ್ನ ಪ್ರಶ್ನೆಯಲ್ಲಿ ಸತ್ವವಿಲ್ಲದ್ದು ನನಗೆ ಅರಿವಾಯ್ತು. ಅವಗುಣಗಳೆಲ್ಲಾ ಪುರುಷತ್ವ ಮತ್ತು ಸದ್ಗುಣಗಳೆಲ್ಲಾ ಹೆಣ್ತನಗಳಾ ಹಾಗಾದರೆ ಎಂದು ಅದೇ ಪ್ರಶ್ನೆಯನ್ನು ತಿರುಚಿ ಕೇಳಿದೆ. ಒಳಿತು ಕೆಡುಕೆಂಬುದರ ಬೇಧ ಮಾಡಲು ಮಧ್ಯ ಒಂದು ರೇಖೆ ಎಳೆದು ಒಳಿತೊಂದು ಕಡೆ ಕೆಡುಕೊಂದು ಕಡೆ ಹಾಕಬೇಕಾಗುತ್ತದೆ. ಇಲ್ಲಿ ಆ ಮಧ್ಯ ರೇಖೆಯೇ ಇಲ್ಲವಾದ್ದರಿಂದ ಒಳಿತು ಕೆಡುಕು ಎಂಬ ಬೇಧವೇ ಇಲ್ಲವೆಂದ. ಇದ್ಯಾಕೋ ಖಂಡಿತವಾಗಿ ನನಗೆ ಅರಗಿಸಿಕೊಳ್ಳುವ ಮಿತಿಯನ್ನು ದಾಟಿ ತುಂಬಾ ದೂರಹೋಗುತ್ತಲಿತ್ತು. ತಲೆಯಲ್ಲಿನ ಪ್ರಪಂಚದಲ್ಲಿ ಕರ್ಕಶ ಸಿಳ್ಳು ಹುಟ್ಟಿಕೊಂಡಿತ್ತು. ನೇರ ಅವನ ಕಾಲಿಗೆ ಸಾಷ್ಟಾಂಗ ನಮಸ್ಕಾರ ಹಾಕಿ ಸಾಕು ಮಾಡು ನಿನ್ನ ಹುಚ್ಚು ಪ್ರವರ ಇದನ್ನು ನಾನೇ ಅಲ್ಲ ಪ್ರಪಂಚದಲ್ಲಿ ಯಾರಿಗೇ ಹೇಳೀದರೂ ನಗುವರಷ್ಟೇ ಹೊರತು ತಮ್ಮಲ್ಲಿ ಗಂಡು ಹೆಣ್ಣು ಇಬ್ಬರೂ ಇದ್ದಾರೆಂದು ಒಪ್ಪಿಕೊಳ್ಳಲಾರರು! ಪ್ರಪಂಚದಲ್ಲಿ ಜಾತಿಯೇ ಇಲ್ಲ, ಯಾರೂ ಮೇಲಲ್ಲಾ, ಕೀಳಲ್ಲಾ, ಸಮಾನರೂ ಅಲ್ಲ, ಯಾರು ಗಂಡೂ ಅಲ್ಲ, ಯಾರು ಹೆಣ್ಣೂ ಅಲ್ಲ, ಎಲ್ಲರೂ ಗಂಡೇ, ಎಲ್ಲರೂ ಹೆಣ್ಣೇ ಎಂದು ನೀವು ಒಪ್ಕೋತೀರಾ???









+ನೀ.ಮ. ಹೇಮಂತ್

Tuesday 26 June 2012

ಸುಸು ಕಥೆ!




         ದರೆ ಆ ಪಾಪು ಯಾಕೆ ಅಳೋಕೆ ಶುರು ಮಾಡ್ತು? ಮಕ್ಕಳ ಮನಸ್ಸನ್ನ ಅರ್ಥ ಮಾಡ್ಕೊಳ್ಳೋದು ಕೂಡ ಅಷ್ಟೋಂದು ಸುಲಭ ಇಲ್ಲ ಸ್ವಾಮಿ. ಏನೇನಾಯ್ತು ಅಷ್ತೊತ್ತಿಂದ ಅಂತ ಹಾಗೇ ಫ್ಲಾಶ್ ಬ್ಯಾಕಿನಲ್ಲಿ ಯೋಚನೆ ಮಾಡಿದೆ. ನಾನು ಮನೆಯಿಂದ ಹೊರಗಡೆ ಬಂದು ನಿಲ್ಲುವ ಸಮಯಕ್ಕೆ ಸರಿಯಾಗಿ ಎದುರು ಮನೆಯ ಆ ಮಗುವೂ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ನಡೆದು ಬಂದು ನಿಂತಿತು. ನನ್ನ ಮನೆಯೂ ಮೊದಲ ಮಹಡಿ, ಅದೂ ಸಹ ಮೊದಲ ಮಹಡಿಯ ಮಗುವೇ. ರಸ್ತೆಯಲ್ಲಿ ಯಾರೋ ಯಮುನಮ್ಮನೋ, ಮುನಿಯಮ್ಮನೋ, ರುಕ್ಮಿಣಮ್ಮನ ಹೆಸರಿನವರೋ ಆಂಟಿಯೊಬ್ಬರು ಆ ಎದುರು ಮನೆ ಪಾಪುವಿನ ವಯಸ್ಸಿನದ್ದೇ ಹೆಣ್ಮಗುವನ್ನ ಸೊಂಟಕ್ಕೆ ಏರಿಸಿಕೊಂಡು ಹೋಗುತ್ತಿದ್ದರು ಆ ಹೆಣ್ಮಗು ಮೇಲೆ ನೋಡಿ ನಗುತ್ತಲಿತ್ತು. ಅರೆರೆ ಯಾಕೆ ನಕ್ತಿತು ಅದು ಎಂದು ಮೇಲೆ ನೋಡಿದರೆ ಆಸಾಮಿ ಪುಟ್ಟ ಚಡ್ಡಿಯನ್ನೇ ಹಾಕದೇ ಸೆನ್ಸಾರ್ ಮಂಡಳಿಯನ್ನ ಪ್ರದರ್ಶನಕ್ಕಿಟ್ಟಿದ್ದಾನೆ. ಲೋ ರಾಜ ಸುಮ್ಮನೆ ಮಾನ ಕಳೀತೀಯಪ್ಪಾ ಹೋಗಿ ಚೆಡ್ಡಿ ಹಾಕ್ಕೋ ಹೋಗೊ ಎಂದು ಒಂದು ಟೆಲಿಪತಿ ಮೆಸೇಜನ್ನು ಅವನೆಡೆಗೆ ಒಗೆದೆ. ಅವನೇನು ಕಮ್ಮಿಯೇ ದೃಷ್ಟಿಯಲ್ಲೇ ೫ಜಿ ಸ್ಪೀಡಿನಲ್ಲಿ ಒಂದು ಮೆಸೇಜನ್ನ ಕಳಿಸಿದ ಹಾಗೆ ಲುಕ್ ಕೊಟ್ಟ. ಲೋ ಗೊಗ್ಗಯ್ಯನ ಮಾದರಿಯ ಗಡ್ಡದಾರಿ ಕಾಡು ಪ್ರಾಣಿ, ಏಸಿ ಗಾಳಿ ತೊಗೊಳ್ಳೋ ಸ್ವಾತಂತ್ರ್ಯ ಇರೋದೇ ಈಗ, ಅದಕ್ಕೂ ಕಲ್ಲು ಹಾಕಬೇಡ, ಬೇಕಾದರೆ ನೀನೂ ಸ್ವಾತಂತ್ರ್ಯವನ್ನ ಅನುಭವಿಸಿ ನೋಡು ಎಂದ. ಮೆಸೇಜನ್ನ ಸುಮ್ಮನೆ ಡಿಲೀಟ್ ಮಾಡಿ ಹಾಕಿ ಆ ಪೋರ್ಟಿಕೋದ ಗ್ರಿಲ್ಸ್ ಬಳಿ ನಿಂತು ಏನು ಮಾಡುತ್ತಿರುವನೆಂದು ಸುಮ್ಮನೆ ನೋಡುತ್ತಾ ನಿಂತೆ. ಈ ಮಕ್ಕಳು ಸುಮ್ಮನೆ ನಿಂತರೂ ನೋಡಲು ಚೆನ್ನ ಬಿಡಿ. ರಾತ್ರಿ ಎಂಟು ಗಂಟೆ, ಅಮ್ಮ ಒಳಗೆ ಚಪಾತಿ ಸುಡುತ್ತಿದ್ದಳು, ನಾನು ಅಪರೂಪಕ್ಕೆ ಮನೆಯಿಂದ ಹೊರಗಡೆ ಸುಮ್ಮನೆ ನಿಂತಿದ್ದೇನೆ. ನಾನು ಸುಮ್ಮನೆ ನಿಂತದ್ದು ನಿಜ ಆದರೆ ಮಕ್ಕಳು ಸುಮ್ಮನೆ ನಿಲ್ಲುವುದು ಖಂಡಿತಾ ಸುಳ್ಳು ಬೀದಿ ದೀಪದ ಬೆಳಕು ನಮ್ಮಿಬ್ಬರ ಮೇಲೂ ಬೀಳುತ್ತಿತ್ತು. ಕಬ್ಬಿಣದ ಕಂಬಿಗೆ ಬಾಯಿ ಹಾಕಿ ಚೀಪುತ್ತಿದ್ದ ಲೇ ಲೇ ತರಲೆ ಧೂಳಿದೆ ಮಾರಾಯ ಮೊದಲೇ ಕಬ್ಬಿಣ ಬೇರೆ, ಮಳೆ ನೀರು ಬಿದ್ದೂ ಬಿದ್ದೂ ಖಂಡಿತಾ ಪೈಂಟೆಲ್ಲಾ ಹೋಗಿ ತುಕ್ಕು ಹಿಡಿದಿರುತ್ತೆ ಕಣೋ ಅಯ್ಯೋ ನಿನಗೆ ವಿಜ್ಞಾನವೆಲ್ಲಾ ಈಗಲೇ ಎಲ್ಲಿ ಗೊತ್ತಾಗಬೇಕು, ಎರಡುವರೆ ವರ್ಷವೋ ಮೂರು ವರ್ಷವೋ ಆಗಿರಬೇಕು ನಿನಗೀಗತಾನೆ. ಗೊತ್ತೇ ಇಲ್ಲದ ಮೇಲೆ ಅವನಿಗೇನೂ ಆಗಲಾರದು ಎಂದುಕೊಂಡೆ. ನನ್ನ ಯೋಚನೆಗೆ ನನಗೇ ನಗು ಬಂತು. ಆದರೆ ಹೌದು, ಗೊತ್ತೇ ಇಲ್ಲದಾಗ ಹೊರಗೆ ಆಟವಾಡಿ ಬಂದು ಕೊಳಕು ಕೈಗಳಲ್ಲೇ ತಿಂಡಿ ತಿಂದಾಗ ಏನಾದರೂ ಆದ ಇತಿಹಾಸವಂತೂ ಇರಲೇ ಇಲ್ಲ, ಈಗ ತಿಂದದ್ದು ಒಳಗೂ ಹೋಗುವುದಿಲ್ಲ ಕೈತೊಳೆಯದಿದ್ದರೆ. ಗೊತ್ತಿಲ್ಲದಿದ್ದಾಗ, ಚಂದ್ರನ ಸುತ್ತ ನಾವು ಸುತ್ತುತ್ತಿದ್ದೆವು. ಈಗ ಚಂದ್ರನೇ ನಮ್ಮ ಸುತ್ತ ಸುತ್ತುತ್ತಿದ್ದಾನೆ. ಗೊತ್ತಿಲ್ಲದಿದ್ದಾಗ, ಊಟ ಮಾಡಿದ್ದಕ್ಕೆ ದುಡ್ಡು ಕೊಡಬೇಕಿತ್ತು, ಈಗ ಕೊಟ್ಟ ಕಾಸಿಗೆ ತಕ್ಕ ಕಜ್ಜಾಯ ಸಿಗುತ್ತೆ….

ನನ್ನನ್ನು ಯೋಚನೆಗೆ ಹಚ್ಚಿ ಅವನೇನು ಮಾಡುತ್ತಿದ್ದಾನಲ್ಲಿ, ಓಹೋ ಅವನೂ ಏನಾದ್ರೂ ಯೋಚಿಸ್ತಿರಬಹುದಾ. ಊಹೂ! ಸಾಧ್ಯಾನೇ ಇಲ್ಲ, ಯೋಚಿಸ್ತಿರೋ ಹಾಗಿದ್ರೆ ಆ ಮುಗ್ಧ ನಗು ಮುಖದಲ್ಲಿ ಇರೋಕೆ ಸಾಧ್ಯಾನೇ ಇಲ್ಲ. ಆ ಕಬ್ಬಿಣದ ಕಂಬಿಗಳನ್ನ ಎಳೆದಾಡುತ್ತಾ ಆಟವಾಡುತ್ತಾ ಇನ್ನೂ ನಿಂತಿದ್ದ. ನಿನ್ನದೇ ಜೀವನ ಕಣೋ, ತುಕ್ಕು ಹಿಡಿದಿರೋ ಕಂಬಿ ಸಾಕು ಆಟವಾಡೋಕೆ, ನಮಗೆ ಚಿನ್ನದ ಹುಚ್ಚು ಹೆಚ್ಚಿ ಬೇರೆಲ್ಲಾ ಸಪ್ಪೆಯಾಗಿ ಕಾಣುತ್ತೆ ಕಣೋ ಎಂದುಕೊಂಡು ಒಂದು ನಿಟ್ಟುಸಿರು ಬಿಟ್ಟು ಅವನ ಕಡೆ ನೋಡಿದರೆ ಸುಯ್ಯನೆ ಚಿಲುಮೆ ಹರಿಯುತ್ತಿದೆ ಅದೂ ಮನೆ ಕಡೆಗೇ ತಿರುಗಿ ಉಯ್ಯುತ್ತಿದ್ದಾನೆ. ಲೇ ಲೇ ಅದರಲ್ಲೂ ಆಟ ಬೇರೆ ಊರೆಲ್ಲಾ ಒಳ್ಳೇ ಗಿಡಕ್ಕೆ ನೀರು ಬಿಡೋ ಹಾಗೆ, ಬರ್ತಾರೆ ತಾಳು ಅಮ್ಮ ಇವಾಗ ಮಾಡ್ತಾರೆ ಸರಿಯಾಗಿ ಅಂತ ನೋಡುತ್ತಾ ನಿಂತೆ. ಟ್ಯಾಂಕು ಖಾಲಿಯಾಯ್ತಂತ ಕಾಣುತ್ತೆ. ಒಂದೆರಡು ನಿಮಿಷ ಸುಮ್ಮನೆ ನಿಂತ. ಯಾಕೆ ಸುಮ್ಮನೆ ನಿಂತಿದ್ದಾನೆ ಅಂತ ಗೊತ್ತಾಗಲಿಲ್ಲ ಕುತೂಹಲ ಹೆಚ್ಚಾಯ್ತು. ತಲೆ ಬಗ್ಗಿಸಿ ನೆಲದ ಮೇಲೆ ಸುಸು ಹರಡಿರುವುದನ್ನ ನೋಡುತ್ತಿದ್ದಾನೇನೋ ಅಂದುಕೊಂಡೆ. ಇರಬಹುದೂ ಸಹ. ಇದ್ದಕ್ಕಿದ್ದಂತೆ ಅಳಲು ಶುರುಮಾಡಿದ. ಅರೆರೆ ಸುಮ್ಮನೆ ನಿಂತಿದ್ದವನು ಅಳಲು ಶುರು ಮಾಡಿಕೊಂಡ! ಯಾರೂ ಹೊಡೆದಿಲ್ಲ. ನಾನಂತೂ ಏನೇ ಮಾತನಾಡಿದ್ದರೂ ಮನಸ್ಸಿನಲ್ಲೇ ಮಾತನಾಡಿಸಿದ್ದು ಅವನನ್ನ. ಅವನ ಮನೆಯ ಒಳಗಿನಿಂದಂತೂ ಸದ್ದೇ ಬಂದಿಲ್ಲ ಹೊರಗೆ. ಮತ್ಯಾಕೆ ಅತ್ತ ಇವ ಜಾಣ ಮರಿ. ಸುಮ್ಮನೆ ನಿಂತಿದ್ದವನ ತಲೆಗೆ ಹುಳ ಬಿಡ್ತಾನಲ್ಲಾ, ಸರಿ, ಕಾದೆ. ಯಾರೋ ಛಟೀರನೆ ಹೊಡೆದಿರುವ ಹಾಗೆ ಅಲ್ಲೇ ಕುಳಿತು ಹೋ ಎಂದು ಕಿರುಚುತ್ತಿದ್ದಾನೆ. ಒಳಗಿನಿಂದ ಯಾರೂ ಬರದಿದ್ದರಿಂದಲೋ ಏನೋ ಬಾಗಿಲವರೆಗೂ ಓಡಿದ ಅಮ್ಮಾ ಎಂದು ಅತ್ತ ಮತ್ತೆ ಓಡಿ ಬಂದು ಸುಸು ಮಾಡಿದ ಜಾಗದಲ್ಲಿ ಕುಳಿತ ಅತ್ತ. ನನಗೆ ಒಂದು ಕಡೆ ನಗು. ಇದೇನು ಹುಚ್ಚಾಟನಪ್ಪಾ ಇವನದ್ದು. ಲೋ ಯಾಕೋ ಮಾರಾಯ ಅಳ್ತಿದ್ದೀಯ, ಏನಾಯ್ತೋ ನಿನಗೆ ಎಂದು ಕೇಳಬೇಕೆನಿಸಿತು ಆದರೆ ರಸ್ತೆಯಲ್ಲಿ ಓಡಾಡುವವರೋ, ಅಕ್ಕ ಪಕ್ಕದವರೋ ಏನಂದುಕೊಂಡಾರೆಂಬ ಹಿಂಜರಿಕೆ. ಹೋ ಜಂಕ್ಷನ್ ಬಾಕ್ಸಿಗೆ ಇರುವೆ ಏನಾದರೂ ಕಚ್ಚಿರಬಹುದೇ ಅಂತ ಕೂಡ ಒಮ್ಮೆ ಸುಳಿದು ಹೋಯ್ತು ಬುದ್ಧಿಯ ಬತ್ತಳಿಕೆಯಲ್ಲಿ. ಪೋರ ಇನ್ನೂ ಅಳುತ್ತಾ ಬಾಗಿಲವರೆಗೂ ಪುಟುಪುಟುಪುಟು ಓಡುವುದು ಮತ್ತೆ ತೀರ್ಥ ಸ್ಥಳಕ್ಕೆ ಮರಳುವುದು. ಅಂತೂ ಮಹಾತಾಯಿ ನಿಧಾನವಾಗಿ ನೈಟಿ ವೇಷ ಭೂಷಣದಲ್ಲಿ ಹೊರಗೆ ಬಂದರು. ವಾಮನನಂತಹ ಈ ಪ್ರಚಂಡ ಹುಯಿಲೆಬ್ಬಿಸುತ್ತಿರುವುದನ್ನು ಕೇಳಿ ಬನಿಯನ್ನಿನ ಹೊಟ್ಟೆಯೊಂದು, ಮತ್ತು ಬೆಂಡಾದ ಎರಡು ಜೀವಗಳು ಹೊರಗೆ ಬಂದು ಸುತ್ತ ನೋಡಿದವು, ಏನಾಯ್ತೋ ಪುಟ್ಟ, ಓನಮ್ಮಾ ರಾಜಾ, ಬಂಗಾರ, ಏನಾಯ್ತು ನೋಡೇ, ಇರ್ಬೆ ಕಚ್ಚೈತೇನೋ ನೋಡು… ಅದು ಇದು ಮಾತನಾಡಿಕೊಂಡರು ಸುತ್ತಾ ನೋಡಿದರು, ನಾನು ಮೊಬೈಲು ಹಿಡಿದು ಗಮನಿಸಿಯೇ ಇಲ್ಲವೆಂಬಂತೆ ನಾಟಕವಾಡುತ್ತಿದ್ದೆ.

ಅವನನ್ನ ಎತ್ತಿಕೊಂಡರು, ಒಳಹೋಗಿ ಬಾಗಿಲು ಹಾಕಿಯೇ ಬಿಟ್ಟರು! ಅಯ್ಯೋ! ರೀ ನನ್ನ ಕಥೆ ಗತಿ ಏನು, ಏನಾಯ್ತು, ಯಾಕಾಯ್ತು, ಏನು ಕಥೆ, ಇಷ್ಟು ಹೊತ್ತೂ ನಿಂತು ತಲೆ ಕೆಡಿಸಿಕೊಂಡವನು ನಾನು, ನೀವೇನಪ್ಪ ಅಂದ್ರೆ ಬಂದ್ರಿ ಹೀರೋನೇ ಹೊತ್ಕೊಂಡು ಹೊರಟೋದ್ರಿ. ಈಗ ಕಥೆ ಹೇಗೆ ಮುಕ್ತಾಯ ಮಾಡಲಿ ನಾನು. ಓದ್ತಿರೋ ಮಹಾಶಯರು ಇಲ್ಲಿವರೆಗೂ ಓದುವ ದುಸ್ಸಾಹ ಮಾಡಿದ್ರೆ ಮುಂದಿನ ನನ್ನ ಕಥೆಗೆ ಕುತ್ತು ಗ್ಯಾರಂಟಿ. ಥತ್ ತೇರೀಕಿ. ಸುಮ್ಮನೆ ವ್ಯರ್ಥವಾಯ್ತಲ್ರೀ ಎಲ್ಲಾ ಕ್ಲೈಮಾಕ್ಸೇ ಇಲ್ಲದ ಕಥೆ ಆಗೋಯ್ತಾ ಇದು? ಆದರೆ ಆ ಪಾಪು ಅತ್ತಿದ್ದು ಯಾಕೆ?

ಕೆಲವು ದಿನಗಳ ನಂತರ ಆಫೀಸಿನಿಂದ ಮನೆಗೆ ಬರುತ್ತಿದ್ದಾಗ ಸಂಜೆ, ಎದುರಿನ ಅದೇ ಮನೆಯಲ್ಲಿ ನಾಲ್ಕೈದು ಹೆಂಗಸರು ನಿಂತು ಬಾಯಿಚಪಲ ತೀರಿಸಿಕೊಳ್ಳುತ್ತಿದ್ದರು, ಈ ಪುಟ್ಟ ಅವರ ಸ್ವಲ್ಪ ಹಿಂದೆಯೇ ನಿಂತಿದ್ದ ಮತ್ತೆ ಸುಸು ಮಾಡಿಕೊಂಡ, ಅದರ ನೈಟಿ ಅಮ್ಮ ಹೇಯ್, ನಿನಗೆ ಎಷ್ಟು ಸಲ ಹೇಳಬೇಕೋ, ಸುಸು ಬಂದ್ರೆ ಅಮ್ಮ ಅಂತ ಕರೀಬೇಕು ಅಂತ ಹೇಳಿಲ್ಲಾ ಅಂತ ನಿಂತಲ್ಲಿಂದಲೇ ಗುಟುರು ಹಾಕಿದ್ರು. ಅವನು ಹೋ ಎಂದು ಅಳಲು ಶುರುಮಾಡಿದ. ಆಹಾ! ಏನ್ ಪ್ರತಿಭಾವಂತನಪ್ಪ ಇವನು, ಅಮ್ಮ ಬಯ್ಯದಿರಲೆಂದು, ಅಮ್ಮನ ಗಮನ ಸುಸುವಿನೆಡೆಗೆ ಹೋಗದಿರಲೆಂದು ಆವತ್ತು ಹಾಗೆ ಅತ್ತನೇನೋ. ಭಾರತದ ರಾಜಕೀಯ ಕ್ಷೇತ್ರಕ್ಕೆ ಒಳ್ಳೆಯ ಭವಿಷ್ಯವಂತೂ ಖಂಡಿತಾ ಇದೆ! ಏನಂತೀರಿ?









+ನೀ.ಮ. ಹೇಮಂತ್

Monday 25 June 2012

ಪ್ರಾಣಿಗಳ ಆಟ!




      ವಾರಾಂತ್ಯ ಬಂತೆಂದರೆ ಬೆಂಗಾಡಿನಲ್ಲಿ ಈ ಆಟಗಳಿಗೆ ಬೇಡಿಕೆಯೋ ಬೇಡಿಕೆ. ವಾರ ಪೂರ್ತಿ ಕತ್ತೆ, ನಾಯಿ, ಹಂದಿಗಳಂತೆ ದುಡಿಯುವ ಆಟವಾಡಿದ ವಯಸ್ಕ ಮನುಷ್ಯ ಪ್ರಾಣಿಗಳಿಗೆ, ಮತ್ತು ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ಶಿಕ್ಷೆ ಪಡೆದ ಮರಿ ಪ್ರಾಣಿಗಳಿಗೆ ವಾರಂತ್ಯದಲ್ಲಿ ಮನೋರಂಜನೆಗಾಗಿ ಕೂಡ ಚಿತ್ರ ವಿಚಿತ್ರ ಆಟಗಳು ಬೇಕೇ ಬೇಕು. ಹಾಗಾಗಿ ತೆರೆದುಕೊಂಡಿತು ಈ ಪ್ರಾಣಿಗಳ ಆಟದ ಮೈದಾನ. ಮೊದಮೊದಲು ಇದಕ್ಕೆ ವಿರೋಧ ವ್ಯಕ್ತವಾಯ್ತೇ ಆದರೂ, ಅತಿಶೀಘ್ರದಲ್ಲಿ ಜನರ ಬೆಂಬಲ ದೊರೆತದ್ದರಿಂದ ಚಾಲ್ತಿಯಲ್ಲಿದೆಯಂತೆ. ಈ ಮೈದಾನದಿಂದ ಎತೇಚ್ಛವಾಗಿ ದುಡ್ಡು ಹುಟ್ಟುತ್ತಿದೆ ಎಂದು ಗೊತ್ತಾದ ಮೇಲೆ ಯಾವ ಸರ್ಕಾರ, ಸಂಘ ಬಂದರೂ, ಸ್ವತಹ ಭಗವಂತನೆಂಬ ಭೂತಕಾಲದ ಪ್ರಾಣಿ ಎದ್ದು ಬಂದರೂ ಸಹ ತಡೆಯಲು ಸಾಧ್ಯವಿಲ್ಲ! ಈಗ್ಗೆ ಕೆಲವು ದಿನಗಳ ಹಿಂದೆ ಇಲ್ಲಿ ಹುಲಿ, ಚಿರತೆ, ಕಾಡು ಕೋಣ, ಆನೆ, ಸಿಂಹ ಈ ರೀತಿಯ ವಿಚಿತ್ರ ಪ್ರಾಣಿಗಳೂ ಸಹ ಇದ್ದವಂತೆ. ಅವುಗಳ ಕಿವಿ ಹಿಂಡಿ, ಮೂತಿ ತಿವಿದು, ತಲೆ ಮೇಲೆ ಹೊಡೆದು, ಕಾಲುಗಳನ್ನು ಎಳೆದು, ಇನ್ನೊಂದು ಮತ್ತೊಂದು ಕೀಟಲೆ ಮಾಡಿ ತೊಂದರೆ ಕೊಟ್ಟು ಮನೋರಂಜನೆ ತೆಗೆದುಕೊಳ್ಳಬಹುದಿತ್ತಂತೆ. ಅವುಗಳು ಅಯ್ಯೋ ನೋವಾಗುತ್ತೆ ಕಣೋ ಬೋಳಿ ಮಗನೆ ಎಂಬಂತೆ ಗುರ್‍ರ್‍ರ್‍ರ್‍, ಟುರ್‍ರ್‍ರ್‍ರ್‍, ಬುರ್‍ರ್‍ರ್‍ರ್‍ ಎಂದು ಆರ್ತನಾದಗಯ್ಯುತಿರೆ ಇನ್ನೂ ಹುರುಪುಗೊಂಡು ಕೀಟಲೆ ಮಾಡುತ್ತಿದ್ದರಂತೆ. ಒಳಗಿದ್ದ ಪ್ರಾಣಿಗಳ ವಿರುದ್ಧ ಹೊರಗಿದ್ದ ಪ್ರಾಣಿಗಳ ಸೆಣಸಾಟದಲ್ಲಿ ಹೊರಗಿನವರು ಗೆದ್ದರೆ ಆನೆಯ ಬಾಲವನ್ನೋ, ಹುಲಿಯ ಮೀಸೆಯನ್ನೋ ಬಹುಮಾನವಾಗಿ ಕೊಡಲಾಗುತ್ತಿತ್ತಂತೆ. ಹೀಗೆ ಹೇಗೋ ನಡೆದುಕೊಂಡು ಹೋಗುತ್ತಿದ್ದ ಮೈದಾನದಲ್ಲಿ ಕ್ರಮೇಣ ಮನುಷ್ಯ ಪ್ರಾಣಿಗಳು ಬರುವುದು ಕುಂಟಿತವಾಗುತ್ತಾ ಬಂತಂತೆ. ಆ ಅಪರೂಪದ ಪ್ರಾಣಿಗಳು ದಿನೇ ದಿನೇ ಕಡಿಮೆಯಾಗಿದ್ದಕ್ಕೆ ಜನ ಬರಲಿಲ್ಲವೋ ಅಥವಾ ತನಗೆ ಕಾಟ ಕೊಡುವವರಿಲ್ಲದೇ ಆ ವಿಚಿತ್ರ ಪ್ರಾಣಿಗಳು ಅಸುನೀಗಿದವೋ ಗೊತ್ತಿಲ್ಲ ಒಟ್ಟಿನಲ್ಲಿ ಆಟದ ಮೈದಾನ ಮುಚ್ಚುವ ಪರಿಸ್ಥಿತಿಯಲ್ಲಿ ಬಂದಿತ್ತಂತೆ. ಹಯ್ಯೋ ಒಂದು ದಿನ ಸಂಪೂರ್ಣ ಮಜಾ ಉಡಾಯಿಸಬೇಕೆಂದು ಬಂದವರಿಗೆ ಈ ಸೆಕ್ಯುರಿಟಿ ತಾತ ಇತಿಹಾಸ ಕುಯ್ಯಲು ಶುರುಮಾಡಿ ಸುಮ್ಮನೆ ಕಾಲಹರಣ ಮಾಡ್ತಿದ್ದ. ತೊಗೋ ತಲೆ ತಿನ್ನಬೇಡ ಇದನ್ನು ತಿನ್ನು ಎಂದು ಒಂದು ಗಾಂಧಿಯ ಗರಿ ಗರಿ ನೋಟೊಂದನ್ನ ಬಾಯಿಗೆ ತುರುಕಿದ್ದೇ ಸುಮ್ಮನೆ ತಿನ್ನಲು ಶುರುಮಾಡಿದ. ನಾವು ಒಳಗೆ ಹೊರಟೆವು. ಎಲ್ಲಾ ಆಟಗಳಿಗೂ ರಶೀದಿ ಪಡೆದಿದ್ದರಿಂದ ತಾತನ ಹರಿಕತೆಯನ್ನೆಲ್ಲಾ ತಲೆಯಿಂದ ಕಿತ್ತು ಬಾಗಿಲಲ್ಲೇ ಇದ್ದ ಕಸದ ಬುಟ್ಟಿಗೆ ಎಸೆದು ಸುಯ್ಯನೆ ಒಳಗೆ ಲಗ್ಗೆಯಿಟ್ಟೆವು.

ಅಬ್ಬಾ ಎಷ್ಟೋಂದು ಮನುಷ್ಯ ಪ್ರಾಣಿಗಳೆಂದರೆ ಪಾಪ ಮಧ್ಯದಲ್ಲಿರಬಹುದಾದ ಮಾತು ಅರ್ಥವಾಗದ ಪ್ರಾಣಿಗಳು ನೋಡಿಯೇ ಹೆದರಿ ಸತ್ತಿರುತ್ತವೆ ಅನ್ನಿಸುತ್ತೆ ಎಂದುಕೊಳ್ಳುತ್ತಲೇ ಪ್ಲಾನ್ ಪ್ರಕಾರವೇ ನಾವು ನಾಲ್ವರು ಗೆಳೆಯರೂ ಒಂದೊಂದು ಆಟಕ್ಕೆ ಹೋಗುವುದೆಂದು ಮೆನು ಕಾರ್ಡ್ ಗಳನ್ನು ಕೈಯಲ್ಲಿ ಹಿಡಿದು ವಿಭಜನೆಯಾದೆವು. ನಾನೂ ಹೊರಟೆ. ಅರೆರೆ ಇಷ್ಟೊಂದು ಆಟಗಳಿವೆ ಯಾವುದಪ್ಪಾ ಆಯ್ಕೆ ಮಾಡಿಕೊಳ್ಳಲಿ ಎಂದು ತೀರ್ಮಾನಿಸುವಷ್ಟರಲ್ಲಿ ಸಾಕು ಸಾಕಾಯ್ತು. ಸರಿ ಸುಲಭದ ಆಟದೊಂದಿಗೆ ಶುರುಮಾಡೋಣವೆಂದು ಬೆಕ್ಕು ಸೊಕ್ಕು ಎಂಬ ಆಟವನ್ನ ಆಯ್ಕೆ ಮಾಡಿಕೊಂಡು ಮೂರನೇ ಕ್ರಾಸ್, ಎರಡನೆಯ ಅಡ್ಡೆ ಎಂದು ಬರೆದಿತ್ತು ಸೀದಾ ಅಲ್ಲಿಗೆ ಹೋದೆ. ಹೋಗಿ ನೋಡಿದರೆ ಎಲ್ಲಾ ಚಿಕ್ಕ ಚಿಕ್ಕ ಮಕ್ಕಳು. ಅಯ್ಯಯ್ಯೋ ಇದು ಏಳು ವರ್ಷದ ಒಳಗಿನ ಮಕ್ಕಳಿಗೆ ಮಾತ್ರ! ಸರಿ ಬಂದಾಗಿದೆ ಯಾವ ರೀತಿಯ ಆಟವೆಂದಾದರೂ ನೋಡಿ ಹೋಗೋಣವೆಂದು ನಿಂತೆ. ಒಂದು ವೃತ್ತ ಅದರ ಒಳಗೆ ಒಂದು ಸಣಕಲು ಬೆಕ್ಕನ್ನ ಬಿಟ್ಟಿರುತ್ತಾರೆ ಆದನ್ನ ಮಗು ಹಿಡಿದು ಮೂಲೆಯಲ್ಲಿರುವ ನೀರಿನ ಕೊಳಕ್ಕೆ ಅದನ್ನ ಹಾಕಬೇಕು. ಬೆಕ್ಕು ತಪ್ಪಿಸಿಕೊಳ್ಳುತ್ತಿರುತ್ತದೆ, ಮಗು ಅದನ್ನ ಅಟ್ಟಿಸಿಕೊಂಡು ಹಿಡಿಯುತ್ತಿರುತ್ತದೆ, ಕೊಟ್ಟ ಸಮಯಾವಕಾಶದಲ್ಲಿ ಮಗು ಗೆದ್ದರೆ ಬಹುಮಾನ. ಒಂದು ಮಗು ಬೆಕ್ಕನ್ನ ಹೆದರೆದರುತ್ತಾ ಹಿಡಿಯಲು ಪ್ರಯತ್ನಿಸುತ್ತಿತ್ತು, ಬೆಕ್ಕು ಮೂಲೆಮೂಲೆಗೆ ತೆವಳಿಕೊಂಡು ತಪ್ಪಿಸಿಕೊಳ್ಳುತ್ತಿತ್ತು, ಅದರ ಅಪ್ಪ ಅಮ್ಮ ಹುರಿದುಂಬಿಸುತ್ತಿದ್ದರು. ಈ ಆಟದ ಪಕ್ಕದಲ್ಲೇ ಇಲಿಗೆ ಕೋಲಿನಲ್ಲಿ ಹೊಡೆಯುವ, ಜಿರಲೆಗಳನ್ನು ಬೆಂಕಿಗೆ ಎಸೆಯುವ ಆಟಗಳೂ ಮಕ್ಕಳಿಗಾಗಿ ಇತ್ತು. ನೋಡುತ್ತಿದ್ದರೆ ಕೆಲಸವಾಗೋಲ್ಲವೆಂದು ಅಲ್ಲಿಂದ ಕಾಲ್ಕಿತ್ತೆ. ಸರಿಯಾಗಿ ಮೆನು ಕಾರ್ಡನ್ನು ಓದಿ, ಮಕ್ಕಳ ಆಟಗಳನ್ನು ಹೊರತುಪಡಿಸಿ ವಯಸ್ಕರಿಗಾಗಿ ಇದ್ದ ಆಟಗಳೆಡೆಗೆ ಹೊರಟೆ.

ಕೈಯಲ್ಲಿ ಇನ್ನು ಮೂರು ಕಲ್ಲುಗಳು ಉಳಿದಿದ್ದವು. ಹೇಗಾದರೂ ಮಾಡಿ ಆ ನಾಯಿಯ ತಲೆಗೆ ಗುರಿ ಇಟ್ಟು ಹೊಡೆಯಲೇ ಬೇಕು. ಸುತ್ತ ಕೋರ್ಟಿನ ಹೊರಗಡೆ ನೆರೆದಿದ್ದ ಜನರ ಪ್ರೋತ್ಸಾಹಕ್ಕೆ, ಕೇಕೆಗಳಿಗೆ, ಹೊಡಿ ಹೊಡಿ ಎಂಬ ಕೂಗುವಿಕೆಯ ಕಡೆಗೆ ಲಕ್ಷ್ಯ ಕೊಡದೆ ಎದುರಿಗಿದ್ದ ನಾಯಿಯನ್ನೇ ತದೇಕಚಿತ್ತದಿಂದ ನೋಡುತ್ತಿದ್ದೆ, ಧರಿದ್ರದ್ದು ಆ ನಾಯಿಯೂ ಕೂಡ ನನ್ನಷ್ಟೇ ಏಕಾಗ್ರತೆವಹಿಸಿತ್ತು. ಸ್ಕೋರ್ ಬೋರ್ಡಿನ ಕಡೆ ಒಮ್ಮೆ ನೋಡಿದೆ. ಇನ್ನೂ ನಾಲಕ್ಕು ಪಾಯಿಂಟುಗಳು ಬೇಕಾಗಿತ್ತು, ಮತ್ತು ನನ್ನ ಬಳಿ ಉಳಿದಿದ್ದು ಮೂರು ಕಲ್ಲುಗಳು ಮಾತ್ರ, ತಲೆಗೆ ಹೊಡೆದರೆ ಮಾತ್ರ ನಾಲಕ್ಕು ಪಾಯಿಂಟುಗಳು ಬರುವುದರಲ್ಲಿದ್ದವು. ಮೊದಲನೆಯ ಕಲ್ಲನ್ನ ಎಸೆದೆ ನಾಯಿ ಗುರ್‍ರ್‍ ರೌ ಬೌ ಎಂದು ಒಮ್ಮೆ ಚೂರು ಮುಂದೆ ಬಂದು ಅದರ ಮುಂಗಾಲಿಗೆ ಏಟು ಬಿದ್ದದ್ದಕ್ಕೆ ತಪ್ಪಿಸಿಕೊಂಡು ಹಿಂದೆ ಓಡಿತು. ಅಯ್ಯೋ ಸ್ವಲ್ಪದರಲ್ಲಿ ತಪ್ಪಿತು. ಅದು ಅಲ್ಲಾಡದ ಹಾಗಿದ್ದಿದ್ದರೆ ತಲೆಗೆ ಹೊಡೆಯಲು ಅಷ್ಟು ಕಷ್ಟವಾಗುತ್ತಿರಲಿಲ್ಲ. ಸರಿ ಇನ್ನೊಂದು ಕಲ್ಲು ಗುರಿಯಿಟ್ಟೆ. ಕಲ್ಲನ್ನು ಅದರೆಡೆಗೆ ಗುರಿಯಿಡುತ್ತಿದ್ದಂತೆಯೇ ಎದುರಿನ ನಾಯಿ ಹುಶಾರಾಗಿಬಿಡುತ್ತಿತ್ತು, ನನ್ನ ಕೈಯಲ್ಲಿದ್ದ ಕಲ್ಲಿಗೇ ತನ್ನ ಎರಡು ಕಣ್ಣುಗಳನ್ನು ನೆಟ್ಟು ತಪ್ಪಿಸಿಕೊಳ್ಳುವ ಶತಪ್ರಯತ್ನಗಳನ್ನೂ ಮಾಡುತ್ತಿತ್ತು, ಅದರ ಗಮನ ಮತ್ತೊಂದು ಕಡೆ ಸೆಳೆಯಲು ಎಡಗೈಯನ್ನು ಸುಮ್ಮನೆ ಹೊಡೆಯುವ ಹಾಗೆ ಮಾಡಿ, ನಾಯಿ ಕೊಂಚವೇ ಅತ್ತ ತಿರುಗಿದ್ದೇ ತೆಗೆದು ಬೀಸಿದೆ, ಕಲ್ಲು ನೇರ ಅದರ ತಲೆಯ ಮಧ್ಯಭಾಗಕ್ಕೇ ಗಾಳಿಯನ್ನು ಸೀಳಿಕೊಂಡು ಸಾಗುತ್ತಿತ್ತು, ನನ್ನ ಎದೆ ಬಡಿತ ನಾಯಿಗೂ ಸಹ ಕೇಳಿಸಿರಬಹುದೇನೋ, ಸುತ್ತ ನೆರೆದು ನೋಡುತ್ತಿದ್ದ ಜನ ಒಮ್ಮೆ ಸ್ತಬ್ಧವಾಗಿ ನೋಡುತ್ತಿದ್ದರು, ಈ ಬಾರಿ ನಾಯಿ ಸೋತಿತು ಈ ಬಾರಿ ಎಂದು ವಿಜಯೋತ್ಸವ ಆಚರಿಸುವವನಿದ್ದೆ. ಕೊಂಚವೇ ಅತ್ತ ತಿರುಗಿದ್ದು ಕಲ್ಲು ಇನ್ನೇನು ತೆಲೆಗೆ ಬಡಿಯಬೇಕು ನಾಯಿ ಕದಲಿಯೇಬಿಟ್ಟಿತು ಕುತ್ತಿಗೆಗೆ ಹೊಡೆದು ಕಲ್ಲು ಕೆಳಗೆ ಬಿತ್ತು, ನಾಯಿ ಕೋಪಕ್ಕೆ ಆ ಕಲ್ಲನ್ನೇ ಕಟಕಟನೆ ಕಡಿದು ಹಾಕಿತು. ಥೂ, ಈ ಬಾರಿಯೂ ಆಗಲಿಲ್ಲ ಇನ್ನು ನನ್ನ ಬಳಿ ಉಳಿದಿರುವುದು ಒಂದೇ ಕಲ್ಲು. ಇದರಲ್ಲಿ ತಲೆಗೇ ಹೊಡೆಯಬೇಕಿತ್ತು. ಈ ಬಾರಿ ಆ ನಾಯಿಯ ಮೇಲೆ ಎದ್ದಿದ್ದ ರೊಚ್ಚಿಗೆ ಕೈಯಲ್ಲಿರುವ ಶಕ್ತಿಯನ್ನೆಲ್ಲಾ ಬೀಸಿ ಆ ನಾಯಿ ಹಿಂದಿನ ದಾಳಿಯಿಂದ ಎಚ್ಚೆತ್ತುಕೊಳ್ಳುವ ಮುನ್ನವೇ ಗುರಿಯಿಟ್ಟು ಅದಕ್ಕೆ ತಯಾರಾಗುವ ಅವಕಾಶವನ್ನೂ ಕೊಡದೇ ಕಲ್ಲನ್ನು ಬೀಸಿದೆ. ನೇರ ಹೋಗಿ ತಲೆಯ ಮಧ್ಯಭಾಗದಲ್ಲಿ ಬಿತ್ತು. ನಾಯಿ ಕುಯ್ ಕುಯ್ ಎಂದು ಚೀರುತ್ತಾ ಕೆಳಗುರುಳಿತು. ಸುತ್ತ ಇದ್ದ ವೀಕ್ಷಕರು ಹೋ ಎಂದರು. ನನಗೆ ಎರಡನೆಯ ಸುತ್ತಿಗೆ ಅರ್ಹತೆ ಸಿಕ್ಕಿತ್ತು ಮೂರು ಪಾಯಿಂಟ್ ಬೋನಸ್ಸಿನೊಂದಿಗೆ. ಎದುರುಗಡೆ ಎರಡು ಹುಚ್ಚು ನಾಯಿಗಳು ಗುರ್‍ರ್‍ ಎಂದು ನನ್ನನ್ನು ತರಿದು ತಿನ್ನುವ ಹಾಗೆ ಬಾಯಿ ತೆರೆದಿದ್ದವು. ಜೊಲ್ಲು ಹೊರಸೋರುತ್ತಿತ್ತು. ನನ್ನ ಕೈಯಲ್ಲಿ ಎರಡು ಉದ್ದನೆಯ ಕೋಲುಗಳಿದ್ದವು ಈಗ ಅದರ ಬಾಲ ಕತ್ತರಿಸಬೇಕಿತ್ತು. ಒಂದೊಂದು ಕೈಯಿಗೆ ಮೂರು ಮೂರು ಹೊಡೆತಗಳ ಅವಕಾಶ ನನ್ನದು. ಅಂತೂ ಹಾಗೂ ಹೀಗೂ ನಾಲಕ್ಕು ಸುತ್ತುಗಳನ್ನು ಗೆದ್ದು ಹೊರಬಂದೆ. ಒಳಗೆ ಆಡುವಾಗ ಗೊತ್ತಾಗಲಿಲ್ಲ ಮೈಪೂರ್ತಿ ಬೆವರು ಸುರಿದುಹೋಗಿರುವುದು. ಬಟ್ಟೆಯೆಲ್ಲಾ ತೊಯ್ದುಹೋಗಿದ್ದವು.

ಬೆವರೊರೆಸಿಕೊಳ್ಳುತ್ತಾ ಸ್ನೇಹಿತರೆಲ್ಲಿದ್ದಾರೆಂದು ಹುಡುಕಾಡಿದೆ. ಒಬ್ಬ ಹಂದಿಯನ್ನು ಹಿಡಿಯುವ ಆಟದಲ್ಲಿದ್ದ. ಅದು ಎಲ್ಲಂದರೆ ಅಲ್ಲಿ ನುಗ್ಗುತ್ತಿರುತ್ತದೆ ಸ್ಪರ್ಧಿಗಳು ಅದರ ಕಿವಿ ಹಿಡಿದು ನಿಲ್ಲಿಸಬೇಕು. ಅದೂ ಒಂದು ರೀತಿ ಚೆನ್ನಾಗಿತ್ತು. ಇನ್ನೊಬ್ಬ ಓಡಿಬಂದವನೇ ಲೋ ಏಕ್ ಮಾರ್ ದೋ ತುಕಡಾ ಆಟ ಆಡಿದ್ದೀಯ ಬಾ ನೋಡು ಎಂದು ಕರೆದು ಹೋದ. ಒಂದು ಡುಪ್ಲಿಕೇಟ್ ಕುರಿ ಇರುತ್ತದೆ ಒಂದೇ ಏಟಿಗೆ ಅದರ ರುಂಡ ಮುಂಡ ಬೇರ್ಪಡಿಸಬೇಕು. ಮೊದಲು ಕುರಿ, ಮುಂದಿನ ಸುತ್ತು ಹಂದಿ, ಅದರ ಮುಂದಿನ ಸುತ್ತು ಹಸು ಅದರ ಮುಂದಿನ ಸುತ್ತು ಹೋರಿಯನ್ನು ಬಿಡುವರಂತೆ. ಸ್ನೇಹಿತ ಎಲ್ಲಾ ಒರಿಜಿನಲ್ ಪ್ರಾಣಿಗಳನ್ನೇ ಇಟ್ಟಿದ್ದಾರೆ ಇದೊಂದು ಮಾತ್ರ ಮೋಸ ಅಲ್ವಾ ಮಗಾ, ಎಂದ ಒಮ್ಮೆ ಲೋ ಪ್ರತೀ ಬಾರಿ ಹೋದವರು ಹೊಡೆದುರುಳಿಸುತ್ತಿದ್ದರೆ ಲಾಸ್ ಅಲ್ವಾ ಅವರಿಗೆ ಅದಕ್ಕೇ ಹೀಗೆ ಮಾಡಿರಬಹುದು ಆದರೂ ಒಂದೇ ಏಟಿಗೆ ಕತ್ತು ಕತ್ತರಿಸೋದಕ್ಕೆ ಸಾಧ್ಯಾನೇನೋ ಅಷ್ಟು ದೊಡ್ಡ ಪ್ರಾಣಿಗಳ ಕುತ್ತಿಗೆಯನ್ನ ಅಂತ ಕುತೂಹಲದಿಂದ ಯಾರೋ ಸಿದ್ಧನಾಗುತ್ತಿದ್ದವನ ಕಡೆ ನೋಡಹತ್ತಿದೆವು. ಸ್ಪರ್ಧಿಯ ಕೈಯಲ್ಲಿದ್ದ ಮಚ್ಚನ್ನೇ ನೋಡುತ್ತಲೇ ಲೋ ನಮ್ಮೂರ್ ಜಾತ್ರೆನಲ್ಲಿ ಒಬ್ಬನೇ ಇಪ್ಪತ್ತರಿಂದ ಇಪ್ಪತ್ತೈದು ಕುರಿಗಳ ಕತ್ತು ಒಂದೇ ಏಟಿಗೆ ಕಡಿದು ರೆಕಾರ್ಡ್ ಮಾಡಿದ್ದಾನೆ ಗೊತ್ತಾ ಅಂದ. ಇರಬಹುದೇನೋ ಎಂದುಕೊಂಡು ಇನ್ನೇನು ಮಚ್ಚು ಬೀಸಲು ಸನ್ನದ್ಧನಾದವನನ್ನು ಕಣ್ಣು ಪಿಳುಕಿಸದೇ ನೋಡಿದೆವು. ಮೂರು ಬಾರಿ ಗಾಳಿಯಲ್ಲಿ ಬೀಸಿ ಬೀಸಿ ಉಸಿರು ಕಟ್ಟಿ ಹುಂ ಎಂದು ಸ್ವರ ಹೊರಡಿಸಿ ಧೊಪ್ಪನೆ ಕುರಿಯ ಕುತ್ತಿಗೆಯ ಭಾಗಕ್ಕೆ ಹೊಡೆದ ನೈಜ ಅನುಭವ ಕೊಡಲೆಂದು ಅದರ ಕುತ್ತಿಗೆಯ ಭಾಗಕ್ಕೆ ಕೆಂಪು ಬಣ್ಣವನ್ನೂ ತುಂಬಿದ್ದರು ಚಿಲುಮೆಯೋಪಾದಿಯಲ್ಲಿ ಚಿಲ್ಲನೆ ಹೊರಚೆಲ್ಲಿತು ಕುತ್ತಿಗೆ ಕೊಂಚವೇ ತಗುಲಿಕೊಂಡು ನೇತಾಡುತ್ತಿತ್ತು. ಹೊರಗಿದ್ದ ಜನ ಹೋssssssss ಎಂದುದ್ಗಾರ ತೆಗೆದರು. ಆ ಕುರಿಯ ಜಾಗದಲ್ಲಿ ಮತ್ತೊಂದನ್ನ ತಂದಿರಿಸಲಾಯ್ತು.

ಬುಲ್ ಫೈಟ್ ಆಟಕ್ಕೆ ಮೂವರು ಗೆಳೆಯರೂ ಒಟ್ಟಿಗೆ ಹೋಗೋಣವೆಂದು ತೀರ್ಮಾನಿಸಿ ಹೊರಟವರಿಗೆ ಎದುರುಗಡೆ ಒಳಗಡೆಯಿಂದ ಪಟಪಟನೆ ಮುಖ ಮುಚ್ಚಿಕೊಂಡು ಹೊರಗೆ ಓಡಿಬಂದು ಜನಜಂಗುಳಿಯಲ್ಲಿ ಕಳೆದುಹೋಗುತ್ತಿದ್ದ ಜನರನ್ನು ಕಂಡು ಆಶ್ಚರ್ಯವಾಯ್ತು. ಅರೆರೆ! ಇದ್ಯಾಕೆ ಈ ರೀತಿ ಹೊರಗೆ ಮುಖ ಮರೆಸಿಕೊಂಡು ಹೋಗುತ್ತಿದ್ದಾರೆಂದು ಅದರ ವಿವರ ಮೆನು ಕಾರ್ಡಿನಲ್ಲಿ ನೋಡಿದರೆ ವಯಸ್ಕರಿಗೆ ಮಾತ್ರ ಇರುವ ಆಟವೆಂದು ತಿಳಿಯಿತು. ಮತ್ತು ಇದಕ್ಕೆ ಕನಿಷ್ಟ ನಾಲ್ಕು ಸದಸ್ಯರು ಬೇಕಿತ್ತು. ಸರಿ ನಾಲ್ವರೂ ಒಟ್ಟು ಸೇರಿ ಹೊರಟೆವು. ಕತ್ತಲೆ ಗುಹೆಯಂತಿದ್ದ ಇದ್ದ ಕಟ್ಟಡ ಒಳ ಹೊಕ್ಕರೆ ಒಂದೊಂದು ಬ್ಯಾಚ್ ಮಾಡಿ ಒಳ ಬಿಡುತ್ತಿದ್ದರು. ನಾವು ನಾಲ್ವರಿದ್ದದ್ದರಿಂದ ತೊಂದರೆಯಾಗಲಿಲ್ಲ. ಒಂದು ಹೆಣ್ಣು ನಾಯಿಯಿರುತ್ತದೆ ಅದರ ಹಿಂದೆ ನಾಲಕ್ಕು ನಾಯಿಗಳನ್ನು ಬಿಡುತ್ತಾರೆ ಆ ನಾಲಕ್ಕು ನಾಯಿಗಳ ಕೊರಳಿಗೆ ಕಟ್ಟಿರುವ ದಾರದ ಇನ್ನೊಂದು ತುದಿಯನ್ನ ಕಬ್ಬಿಣದ ಬೇಲಿಯ ಹೊರಗಡೆ ನಿಲ್ಲುವ ನಾಲ್ವರಿಗೆ ಕೊಡಲಾಗುತ್ತದೆ. ಮೂರು ನಾಯಿಗಳನ್ನು ತಪ್ಪಿಸಿ ಆ ನಾಯಿ ಗೆಲ್ಲಬೇಕು. ಗುದ್ದಾಡಿ, ಬಡಿದಾಡಿ, ಯಾರೂ ಗೆಲ್ಲದೇ ಸಮಯಾವಕಾಶ ಮೀರಿ ಹೊರಗೆ ಒಬ್ಬರನ್ನೊಬ್ಬರು ಛೇಡಿಸುತ್ತಾ, ಆಡುವಾಗ ಒಬ್ಬೊಬ್ಬರೂ ನೀಡುತ್ತಿದ್ದ ಮುಖಭಾವವನ್ನು ಅನುಕರಿಸುತ್ತಾ, ನಗುತ್ತಾ ಹೊರಬಂದೆವು. ಹೊಟ್ಟೆ ಹುಣ್ಣಾಗುವಷ್ಟು ನಕ್ಕೆವು. ಕಣ್ಣುಗಳು ಮಂಜು ಮಂಜಾಗಿಹೋಯ್ತು ಒಬ್ಬೊಬ್ಬರ ಮುಖಭಾವ, ಪ್ರಯತ್ನಗಳನ್ನೂ ನೆನೆನೆನೆಸಿಕೊಂಡು. ಸುಸ್ತಾಗಿ, ಅಲ್ಲೇ ಸ್ವಲ್ಪ ದೂರ ಬಂದು ಕಟ್ಟೆಯ ಮೇಲೆ ಕುಳಿತೆವು. ಎದುರುಗಡೆ ಒಂದು ಆಟದ ಕೋರ್ಟನ್ನು ಕಟ್ಟಲಾಗುತ್ತಿತ್ತು. ಇದೇನಿರಬಹುದೆಂದು ಮೆನು ಕಾರ್ಡನ್ನು ನೋಡಿದೆ. ಕಣ್ಣು ತುಂಬಿದ್ದ ನೀರು ಒರೆಸಿಕೊಂಡು ನೋಡಿದರೆ ಅತಿಶೀಘ್ರದಲ್ಲಿ ಅಲ್ಲಿ ಮನುಷ್ಯ ಪ್ರಾಣಿಯನ್ನು ಇಡಲಾಗುವುದೆಂದು ಬರೆದಿತ್ತು.

ದೊಡ್ಡ ಜಾರೋ ಬಂಡೆ, ಅದರಲ್ಲಿ ನೀರು ಸುರಿಸುರಿದು ಜಾರುತ್ತಲಿತ್ತು ಹಾಕಲು ಬಟ್ಟೆಯೂ ಕೊಟ್ಟಿಲ್ಲ ಏರಿಯನ್ನು ಏರಿ ಮೇಲೆ ತಲುಪುವುದು ನನ್ನ ಕೆಲಸ, ನನ್ನನ್ನು ತಡೆದು ಕೆಳಗೆ ಹಳ್ಳಕ್ಕೆ ಬೀಳಿಸಲು ಸುತ್ತೆಲ್ಲ ಕಡೆ ನಿಂತಿರುವ ಜನರಿಗೆ ಹಗ್ಗ ಕೊಡಲಾಗಿತ್ತು ನನ್ನ ಕೈಯಿಗೋ ಕಾಲಿಗೋ ಸೊಂಟಕ್ಕೋ ಎಸೆದು ಸಿಕ್ಕಿಸಿ ಕೆಳಗೆಳೆಯುತ್ತಿದ್ದರು. ನಾನು ಜೀವಕ್ಕಾಗಿ ಹೋರಾಡುತ್ತಿದ್ದೆ ಅವರು ಮನೋರಂಜನೆಗಾಗಿ ಹೋರಾಡುತ್ತಿದ್ದರು. ಎಷ್ಟು ಬಾರಿ ಬಿಡಿಸಿಕೊಂಡು ಮೇಲೆ ಏರುತ್ತಿದ್ದರೂ ಇನ್ನೇನು ಮೇಲಿನ ಘಟ್ಟಕ್ಕೆ ತಲುಪಿಯೇ ಬಿಟ್ಟೆ ನಾನೇ ಗೆದ್ದೆ ಎಂದುಕೊಳ್ಳುವಷ್ಟರಲ್ಲಿ ಹಗ್ಗ ಹಾಕಿ ಎಳೆದುಬಿಡುತ್ತಿದ್ದರು ಕೆಳಗೆ ನೋಡಿದರೆ ಹಳ್ಳದಲ್ಲಿ ಹಂದಿ, ಹುಚ್ಚು ನಾಯಿ, ಕುರಿ, ಕೋಳಿ, ಇರುವೆ, ಜಿರಳೆ, ಇಲಿ, ಬೆಕ್ಕು, ಹಸು, ಎಲ್ಲಾ ಬಾಯಿ ತೆರೆದು ಅರಚುತ್ತಾ ನಾನು ಬೀಳುವುದನ್ನೇ ಕಾಯುತ್ತಿದ್ದವು. ಹಸುವಿನ ಬಾಯಲ್ಲಿ ನನ್ನ ವಸ್ತ್ರಗಳೆಲ್ಲಾ ಸೇರಿಹೋಗುತ್ತಿದ್ದವು. ಅಯ್ಯಯ್ಯೋ ನಾನು ಹಳ್ಳಕ್ಕೆ ಬಿದ್ದರೆ ಖಂಡಿತಾ ನನ್ನನ್ನು ಬಿಡುವುದಿಲ್ಲ, ತರಿದುತಿಂದುಬಿಡುತ್ತವೆ. ಯಾರಾದರೂ ನನ್ನ ಸಹಾಯಕ್ಕೆ ಇದ್ದಾರೋ ಎಂದು ಸುತ್ತ ನೋಡಿದೆ, ಹಗ್ಗ ಎಸೆಯುತ್ತಿದ್ದವರಲ್ಲಿ ನನ್ನ ಸ್ನೇಹಿತರೂ ಇದ್ದರು. ಕಣ್ಣು ತಿಂಬಿಹೋದವು, ಉಸಿರುಕಟ್ಟಿಬರುತ್ತಿತ್ತು. ಮೈಕೈಯಲ್ಲಿ ಇದ್ದ ಶಕ್ತಿಯೆಲ್ಲವನ್ನೂ ಉಪಯೋಗಿಸಿ ಮೇಲೆ ಗುರಿ ಮುಟ್ಟುವತನಕ ಯಾವ ಪಾಶದ ದಾಳಿಗೂ ಕುಗ್ಗದೇ ಏರುವುದೆಂದು ದೃಷ್ಟಿ ನೆಟ್ಟೆ ಏರಿದೆ, ಎಲ್ಲ ಬದಿಯಿಂದಲೂ ಜನರು ಹಗ್ಗಗಳನ್ನು ಎಸೆದು ಎಳೆಯಲು ಶುರುಮಾಡಿದರು. ಅಯ್ಯೋ ನನಗ್ಯಾಕೀಗತಿ ಬಂತೋ ಗೊತ್ತಿಲ್ಲ ಚೀರಿದೆ, ಇನ್ನೂ ಶಕ್ತಿಯುಪಯೋಗಿಸಿ ಮೇಲೆ ಹತ್ತಲು ಪ್ರಯತ್ನಿಸಿದೆ. ಇಲ್ಲಿಂದ ಮೊದಲು ಓಡಿಹೋಗಬೇಕೆನಿಸಿತು.

ಇನ್ನೂ ಹೊಟ್ಟೆ ಹಿಡಿದುಕೊಂಡು ನಗುತ್ತಲಿದ್ದ ಸ್ನೇಹಿತರನ್ನೊಮ್ಮೆ ನೋಡಿದೆ, ಮಂಜು ಮಂಜಾಗಿ ನಿರ್ಮಾಣವಾಗುತ್ತಿದ್ದ ಮೈದಾನವನ್ನು ನೋಡಿದೆ ಕೈಕಾಲು ಹೃದಯ ಥರಥರನೆ ನಡುಗುತ್ತಿತ್ತು. ನನ್ನಲ್ಲಿನ ನಗು ಯಾವುದೋ ಕಾಲದಲ್ಲಿ ಉಡುಗಿಹೋಗಿತ್ತು. ಆ ಎತ್ತರದ ಪ್ರದೇಶದಲ್ಲಿ ರಕ್ತಕಣ್ಣೀರಿನೊಂದಿಗೆ, ಹಗ್ಗಗಳ ಸರಳಿನೊಂದಿಗೆ ಇನ್ನೂ ನಿಂತಿರುವಂತೆ ಕಂಡಿತು. ಕೈಯಲ್ಲಿದ್ದ ಮೆನು ಕಾರ್ಡನ್ನು ಬಿಸುಟಿ ಮನುಷ್ಯ ಪ್ರಾಣಿಗಳನ್ನು ನೂಕಿ, ನುಸುಳಿ, ಜಾಗ ಮಾಡಿಕೊಂಡು ಓಡಿದೆ, ಓಡಿದೆ, ಓಡಿದೆ, ಓಡಿದೆ ಆಟದ ಮೈದಾನಗಳಿಂದಾಚೆಗೆ, ಮನುಷ್ಯ ಪ್ರಾಣಿಗಳಿಂದ ದೂರಕೆ, ಓಡುತ್ತಲೇ ಇದ್ದೆ. ಸೆಕ್ಯುರಿಟಿ ತಾತ ಗಾಂಧಿ ನೋಟನ್ನು ಥುಪುಕ್ಕನೆ ನನ್ನೆಡೆಗೆ ಉಗಿದು ಕೈ ತೋರಿಸುತ್ತಾ ಹೇssss ಹೆಹೆಹೆಹೆಹೆ ಎಂದು ನಗುತ್ತಲಿದ್ದಂತೆನಿಸಿತು, ಹಿಂದಿರುಗಿ ನೋಡಲೂ ಇಲ್ಲ ಶಬ್ಧಗಳು ಮರೆಯಾಗುವವರೆಗೂ, ಕತ್ತಲೆ ಕವಿಯುವವರೆಗೂ, ಓಡುತ್ತಲೇ ಇದ್ದೆ.








+ನೀ.ಮ. ಹೇಮಂತ್